ಲೇಖಕರು : ಪಣಿಯಾಡಿ ರಾಜೇಶ್ ಭಟ್
ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ವಿಶೇಷ ಆಚರಣೆಗಳಲ್ಲಿ ಋಗುಪಾಕರ್ಮ ಹಾಗೂ ಯಜುರ್ ಉಪಾಕರ್ಮಗಳೂ ಬಹು ಮುಖ್ಯವಾದವುಗಳು. ಈ ದಿನ ವೇದಾಧ್ಯಯನ ಹಾಗೂ ಆಧ್ಯಾತ್ಮ ಸಾಧನೆಗಾಗಿ ಸಂಕಲ್ಪಿಸುವ ದಿನ ಮತ್ತು ವೇದ ಮಂತ್ರಗಳನ್ನು ಕಾಲನಿಯಾಮಕನಾದ ಭಗವಂತನಿಗೆ ಅರ್ಪಿಸುವ ಪುಣ್ಯ ದಿನ. ಈಗಿನ ಕಾಲಸ್ಥಿತಿಯಲ್ಲಿ ಯೋಚಿಸುವುದಾದರೆ ವಟು ಹಾಗೂ ಬ್ರಾಹ್ಮಣ ತನ್ನ ಕರ್ತವ್ಯಗಳ ಪಟ್ಟಿಯನ್ನು ನವೀಕರಿಸುವ ( renewal) ಒಂದು ಕ್ರಮ ಎನ್ನಬಹುದು. ಈ ದಿನ ದೇವ, ಋಷಿ, ಪಿತೃಗಳನ್ನು ನೆನಪಿಸಿಕೊಂಡು ಹವಿಸ್ಸು ಒಪ್ಪಿಸಿ ತರ್ಪಣವನ್ನು ನೀಡುವ ಕ್ರಮ ರೂಡಿಯಲ್ಲಿದೆ. ಆತ ಧರಿಸುವ ಪರಮ ಪವಿತ್ರವಾದ ಯಜ್ಞೋಪವೀತದ ಮೂರೆಳೆದಾರ ಹಾಗೂ ಬ್ರಹ್ಮಗಂಟನ್ನು ನಾಲ್ಕು ವೇದಗಳಿಗೆ ಹೋಲಿಸಲಾಗುತ್ತದೆ ಮತ್ತು ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ಇದು ಸೂಚಿಸುತ್ತದೆ. ಒಬ್ಬ ವಟು ಹಾಗೂ ವಿಪ್ರನ ದುರಾಲೋಚನೆಗಳಿಗೆ ಕಡಿವಾಣ ಹಾಕಿ ಸಾತ್ವಿಕನನ್ನಾಗಿ ಮಾಡಿ ಸತ್ಕರ್ಮ ಹಾಗೂ ಧರ್ಮ ಮಾರ್ಗದಲ್ಲಿ ನಡೆಯಲು ಇದು ಪ್ರೇರೇಪಿಸುತ್ತದೆ. ಅವನ ಅಧ್ಯಯನದ ಶಕ್ತಿ ಆ ಯಜ್ಞೋಪವೀತದಲ್ಲಿ ಸಂಚಯನಗೊಂಡು ಆತನಿಗೆ ಸದಾ ರಕ್ಷಣೆಯನ್ನು ನೀಡುತ್ತದೆ ಎನ್ನುವುದು ಬಲ್ಲವರ ನಂಬಿಕೆ.