ವರದಿ : ದಿನೇಶ್ ರಾಯಪ್ಪನಮಠ
ಕೋಟ: ಗೆಳೆಯರ ಬಳಗ ಕಾರ್ಕಡ ಇದರ ವತಿಯಿಂದ ಕೋವಿಡ್ ಲಸಿಕಾ ಮೇಳ ಬುಧವಾರ ಕಾರ್ಕಡ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಉದ್ಘಾಟಿಸಿ ಕೋವಿಡ್ ಅನ್ನು ತಡೆಗಟ್ಟಲು ಬೇಕಾದ ಸಮರೋಪಾಧಿ ಕ್ರಮಗಳನ್ನು ಸರಕಾರ ಆಯಾ ಭಾಗದಲ್ಲಿ ಹಮ್ಮಿಕೊಂಡಿದೆ.ನಮ್ಮ ಈ ಭಾಗದಲ್ಲಿ ನಮ್ಮಿಂದಾದ ಪ್ರಯತ್ನಗಳು ಜನಪ್ರತಿನಿಧಿಗಳ ಆಯಾ ನಮ್ಮ ಸಿಬ್ಬಂದಿಗಳ ಮೂಲಕ ಯಶಸ್ವಿಗೊಳಿಸಲಾಗುತ್ತಿದೆ ದೇಶದ ಹಾಗೂ ರಾಜ್ಯ ವಿವಿಧ ಕಡೆಗಳಲ್ಲಿ ಲಸಿಕಾ ಮೇಳಗಳನ್ನು ಆಯೋಜಿಸಲಾಗುತ್ತದೆ ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಘಸಂಸ್ಥೆಗಳ ಪಾತ್ರ ಗಣನೀಯವಾದದ್ದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅಭ್ಯಾಗತರಾಗಿ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್, ಸಾಲಿಗ್ರಾಮ ಪ.ಪಂಚಾಯತ್ ಸದಸ್ಯೆ ಗಿರೀಜಾ ಪೂಜಾರಿ,ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಸಿಬ್ಬಂದಿ ಮಿನ್ನು,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು. ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ್ ಹೊಳ್ಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿ ವಂದಿಸಿದರು.