ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕಳೆದ ಹಲವು ದಿನಗಳಿಂದ ಕೋಟ ಪರಿಸರದ ಗಾಣಿಗ ಸಮಾಜಕ್ಕೆ ಸೇರಿದ್ದ ಕಮಲ ಗಾಣಿಗ ಎನ್ನುವ ಅನಾಥ ವೃದ್ಧೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅನಾಥ ಸ್ಥಿತಿ ಇರುವುದಾಗಿ ಹಾಗೂ ಆಕೆಗೆ ನೆರವಾಗುವಂತೆ ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದ ಪೋಸ್ಟರ್ ವೈರಲ್
ಆಗಿತ್ತು. ಈ ಕುರಿತು ಮಾಹಿತಿ ತಿಳಿದ ತತ್ಕ್ಷಣ ಗಾಣಿಗ ಯುವ ಸಂಘಟನೆ ಕೋಟ ಘಟಕದ ಸದಸ್ಯರು ಸಂಘದ ಅಧ್ಯಕ್ಷ ವಿಶ್ವನಾಥ ಗಾಣಿಗ ಬೆಟ್ಲಕ್ಕಿಯವರ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅಜ್ಜಿಯನ್ನು ಮಾತಾಡಿಸಿ ಮಾಹಿತಿ ಪಡೆದಾಗ, ತನಗೆ ಮಕ್ಕಳು ಯಾರೂ ಇಲ್ಲ. ತಾನು ಅನಾಥೆಯಾಗಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿರುವುದಾಗಿ ಹಾಗೂ ಅನಾರೋಗ್ಯದ ಕಾರಣ ಆರೇಳು ತಿಂಗಳ ಹಿಂದೆ ಯಾರೋ ಅಪರಿಚಿತರು ಆಸ್ಪತ್ರೆಗೆ ದಾಖಲಿಸಿರುವುದಾಗಿ ಹಾಗೂ ಪ್ರಸ್ತುತ ಯಾರೂ ತನ್ನವರು ಇಲ್ಲದ ಕಾರಣ ಗುಣಮುಖವಾದರೂ ಆಸ್ಪತ್ರೆಯಿಂದ ಎಲ್ಲಿಗೆ ಹೋಗುವುದು ಎಂದು ತಿಳಿಯದಿರುವುದಾಗಿ ತಿಳಿಸಿತ್ತು.
ಅಜ್ಜಿ ಮನೆ, ಮಕ್ಕಳು, ಸಂಸಾರ ಯಾವುದೂ ಇಲ್ಲ. ಹೀಗಾಗಿ ಎಲ್ಲಿಗೆ ಹೋಗಬೇಕು, ಯಾರ ಬಳಿ ನೆರವು
ಯಾಚಿಸಬೇಕು ಎನ್ನುವುದು ತಿಳಿಯದಾಗಿದೆ. ಹೀಗಾಗಿ ಅಜ್ಜಿಯನ್ನು ಯಾವುದಾದರು ಅನಾಥಶ್ರಮಕ್ಕೆ ಸೇರಿಸುವ ಸಂಕಲ್ಪವನ್ನು ಗಾಣಿಗ ಯುವ ಸಂಘಟನೆ ಕೋಟ ಘಟಕ ಮಾಡಿ ಐದಾರು ಆಶ್ರಮಗಳನ್ನು ಸಂಪರ್ಕಿಸಿತು. ಆದರೆ ಅಜ್ಜಿಗೆ ನಡೆಯಲು ಆಗದ ಸ್ಥಿತಿ ಇರುವುದು ಹಾಗೂ
ಹಾಸಿಗೆಯಲ್ಲೇ ಎಲ್ಲಾ ಚಾಕರಿಗಳನ್ನು ಮಾಡಿಸಬೇಕಾದ ಕಾರಣಕ್ಕೆ ಅನಾಥಶ್ರಮದವರು ಸೇರಿಸಲು ಅಸಾಧ್ಯವಾಯಿತು. ಆದರೆ ಅಜ್ಜಿಯನ್ನು ನಡುನೀರಿನಲ್ಲಿ ಕೈಬಿಡ ಬಾರದು ಎನಾದರೂ ಮಾಡಿ
ವ್ಯವಸ್ಥಿತ ಜಾಗಕ್ಕೆ ಸೇರ್ಪಡೆಗೊಳಿಸಬೇಕು. ಆಕೆ ಹೆಚ್ಚಿನ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎನ್ನುವ ಹಠಕ್ಕೆ ಬಿದ್ದ ಗಾಣಿಗ ಯುವ ಸಂಘಟನೆ ಹೋಮ್ ನರ್ಸ್ಗಳ ಸೇವೆ ಇರುವ ಹಿರಿಯರ ಶುಶ್ರೂಷೆ ಕೇಂದ್ರಗಳನ್ನು ವಿಚಾರಿಸಿತು.
ಆದರೆ ಅಲ್ಲಿ 20ರಿಂದ 40
ಸಾವಿರ ಮುಂಗಡ ಹಣ ಹಾಗೂ 10-20ಸಾವಿರ ತಿಂಗಳಿಗೆ ಚಾರ್ಜ್ ನೀಡಬೇಕಾಗಿತ್ತು. ಆದರೆ ಅಜ್ಜಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದರೆ ಸ್ವಲ್ಪ ದಿನದಲ್ಲೇ ಪ್ರಾಣಕ್ಕೆ ಅಪಾಯವಾಗಬಹುದು ಮತ್ತು ತನ್ನ ಸಮಾಜದವರು ತನ್ನನ್ನು ಭೇಟಿಯಾದರೂ ಏನೂ ಸಹಾಯ ಮಾಡಲಿಲ್ಲ ಎನ್ನುವ ಭಾವನೆ ಬರಬಹುದು ಎನ್ನು ಆಲೋಚನೆಯೊಂದಿಗೆ ಕೊನೆಗೆ ಕೋಟೇಶ್ವರದಲ್ಲಿರುವ ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರದಲ್ಲಿ 20 ಸಾವಿರ ಮುಂಗಡ ಹಣ ಹಾಗೂ ತಿಂಗಳಿಗೆ 9ಸಾವಿರ ರೂ ಚಾರ್ಜ್ ನೀಡುವ ಮಾತುಕತೆ ನಡೆಸಿ ಕೋಟ ಭಾಗದ ಸಂಘದ ಸದಸ್ಯರಿಂದ
21ಸಾವಿರ ಒಟ್ಟುಗೂಡಿಸಿ ಶುಕ್ರವಾರ ಸಂಜೆ ಕೋ
ಟೇಶ್ವರದಲ್ಲಿರುವ ಸರ್ಜನ್ ಆಸ್ಪತ್ರೆಯ ಹಿರಿಯರ ಶುಶ್ರೂಷೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ. ಒಂದು ವ್ಯವಸ್ಥಿತವಾದ ಜಾಗ ಹಾಗೂ ಹೋಮ್ ನರ್ಸ್ಗಳ ಉತ್ತಮ ಆರೈಕೆಯಿಂದಾಗಿ ಅಜ್ಜಿ ತುಂಬಾ
ಸಂತೋಷದಲ್ಲಿದ್ದು ಮರು ಜನ್ಮ ಸಿಕ್ಕಂತೆ ಸಂತಸಪಡುತ್ತಿದೆ. ಅಜ್ಜಿಯ ಸಂತೋಷ ಇದೇ ರೀತಿ ಮುಂದುವರಿಯಬೇಕಾದರೆ , ಅಜ್ಜಿ ನಡೆದಾಡಿ ತನ್ನ ಕೆಲಸ ಕಾರ್ಯಗಳನ್ನು ತಾನೇ ಮಾಡಿಕೊಳ್ಳುವ ತನಕ ಪ್ರತಿ ತಿಂಗಳು ಶುಶ್ರೂಷೆ ಕೇಂದ್ರಕ್ಕೆ ನಿರ್ವಹಣೆಗೆ ಹಣ ಹೊಂದಿಸಬೇಕಾದ ಸವಾಲು ಸಂಘಟನೆಯ ಮುಂದಿದೆ. ಹೀಗಾಗಿ ಸಮಾಜದ ದಾನಿಗಳ ನೆರವು
ಅಗತ್ಯವಾಗಿ ಬೇಕಿದೆ, ಆದ್ದರಿಂದ ಸಹೃದಯರು ಸಹಕಾರ ಅಗತ್ಯ ಎನ್ನುವ ಮನವಿಯನ್ನು ಗಾಣಿಗ ಯುವ ಸಂಘಟನೆ ಮಾಡಿದೆ.
ಈ ಕಾರ್ಯದಲ್ಲಿ ಗಾಣಿಗ ಯುವ ಸಂಘಟನೆ ಕೋಟ ಘಟಕದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ, ಕಾರ್ಯದರ್ಶಿ ಗಣೇಶ್ ಗಾಣಿಗ ಚಿತ್ರಪಾಡಿ, ಖಜಾಂಚಿ ಗಿರೀಶ್ ಗಾಣಿಗ, ಸಮಾಜದ ಪ್ರಮುಖರಾದ ದಿನೇಶ್ ಗಾಣಿಗ ಕೋಟ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಜೇಶ್ ಗಾಣಿಗ ಅಚ್ಲಾಡಿ, ಸುರೇಶ್ ಗಾಣಿಗ ಶೇವಧಿ, ಕಿರಣ್ ಗಾಣಿಗ ಗೆಂಡೆಕೆರೆ, ವಿಜಯ ಗಾಣಿಗ ಕಾರ್ಕಡ, ರಂಜಿತ ಕಾರ್ಕಡ, ನಾಗರಾಜ್ ಪುತ್ರನ್ ಜೀವನ್ಮಿತ್ರ ತಂಡ,
ನಿತ್ಯಾನಂದ ಒಳಕಾಡು, ತಾರಾನಾಥ ಮೆಸ್ತ ತಂಡ ಸಹಕರಿಸಿದರು.