ಬೆಂಗಳೂರು : ರಾಜ್ಯದಲ್ಲಿ ಒಮ್ರಿಕಾನ್ ವೈರಸ್ ನ ಎರಡು ಪ್ರಕರಣ ಪತ್ತೆಯಾಗಿದೆ. ವಿಶ್ವದಲ್ಲಿ 400 ಪ್ರಕರಣಗಳಿವೆ. ಆದರೆ, ಈ ವೈರಸ್ ತೀವ್ರವಾಗಿಲ್ಲ ಎಂಬ ಅನೌಪಚಾರಿಕ ಮಾಹಿತಿ ಬಂದಿದೆ ಎಂದು ಸಚಿವ ಅಶೋಕ್ ತಿಳಿಸಿದರು. ಅವರು ಸಿಎಂ ಹಾಗೂ ತಜ್ಞರೊಂದಿಗಿನ ಮಹತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದೇಶದಿಂದ ನಗರಕ್ಕೆ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆ ನಡೆಸಲಾಗುತ್ತದೆ. ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ಮೇಲಷ್ಟೆ ಹೊರಗೆ ಬಿಡಲಾಗುವುದು. ಹೆಚ್ಚು ಪರೀಕ್ಷೆಗಳು ಮಾಡುವುದು. ಥಿಯೇಟರ್, ಮಾಲ್, ಶಾಲೆಗೆ ಮಕ್ಕಳನ್ನು ಬಿಡುವ ಪೋಷಕರು ಎರಡು ಡೋಸ್ ಲಸಿಕೆ ಪಡೆದಿದ್ದಲ್ಲಿ ಮಾತ್ರ ಪ್ರವೇಶವಕಾಶ. ಶಾಲೆಗಳಲ್ಲಿ ಸಭೆ, ಸಮಾರಂಭಕ್ಕೆ ಅವಕಾಶವಿಲ್ಲ. ಮದುವೆಗಳಿಗೆ 500 ಜನರಿಗಷ್ಟೇ ಅವಕಾಶ ಎಂದು ಹೇಳಿದರು.
1 ಲಕ್ಷ ಪರೀಕ್ಷೆ:
ಪ್ರತಿದಿನ 1 ಲಕ್ಷ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಐಸೋಲೇಷನ್ ವಾರ್ಡ್ ಮತ್ತೆ ತೆರೆಯಲು ಸೂಚನೆ. ಆಮ್ಲಜನಕ ಉತ್ಪಾದನೆ ಮೊದಲಾದ ವಿಚಾರಗಳಿಗೆ ಸಂಬಂಧಪಟ್ಟ ಘಟಕಗಳನ್ನು ಮತ್ತೆ ತೆರೆಯಲಾಗುವುದು. ಕಂಟ್ರೋಲ್ ರೂಂ ತೆರೆಯಲು ಸೂಚನೆ ನೀಡಲಾಗಿದೆ. ಜೌಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕೋವಿಡ್ ಟೆಸ್ಟ್ಗೆ ದರ ನಿಗದಿ:
ಏರ್ಪೋರ್ಟ್ ಕೋವಿಡ್ ಟೆಸ್ಟ್ಗೆ ದರ ನಿಗದಿ ಮಾಡಲಾಗಿದೆ. ಸಾಮಾನ್ಯ ಕೋವಿಡ್ ಪರೀಕ್ಷೆಗೆ 500 ರೂಪಾಯಿ ದರ ಮತ್ತು ಅಬೇಟ್ ಮಾಡಿಸಲು 3 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಟೆಸ್ಟ್ ವರದಿ ಬರಲು 3 ರಿಂದ 4 ಗಂಟೆ ಸಮಯ ಕಾಯಬೇಕು ಎಂದು ಮಾಹಿತಿ ನೀಡಿದರು.