ವರದಿ : ದಿನೇಶ್ ರಾಯಪ್ಪನಮಠ
ಬೈಂದೂರು : ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕೆ ಯಾತ್ರಾರ್ಥಿಗಳನ್ನು ಕರೆತರುತ್ತಿದ್ದ ಬಸ್ ಉರುಳಿ ಬಿದ್ದ ಘಟನೆ ಕೊಲ್ಲೂರಿನ ದಳಿಯಲ್ಲಿ ನಡೆದಿದೆ. ಪರಿಣಾಮ ಬಸ್ಸಿನಲ್ಲಿದ್ದಂತ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ.
ಅಪಘಾತದಿಂದಾಗಿ 22 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. 22 ಮಂದಿಯ ಪೈಕಿ ಶಂಕರಪ್ಪ (50), ರೂಪಾ (35), ಶ್ಯಾಮಲಮ್ಮ (42), ರತ್ನಮ್ಮ (52), ವೆಂಕಟರಮಣ (45), ಚಂದ್ರಕಲಾ (43), ಕಲಾವತಿ ಅವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಮೂವರು ಮಹಿಳೆಯರ ಕೈ ತುಂಡಾಗಿದ್ದು, ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ. ಇನ್ನೊಬ್ಬರ ಪಕ್ಕೆಲುಬು ಮುರಿದಿದೆ.
ಗಾಯಾಳುಗಳು ಕೋಲಾರದ ಮುಳುಬಾಗಿಲು ಮೂಲದವರೆಂದು ತಿಳಿದುಬಂದಿದೆ. ಸಿಗಂಧೂರಿನಿಂದ ಕೊಲ್ಲೂರಿಗೆ ಬಸ್ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ಉಳಿದ ಗಾಯಾಳುಗಳನ್ನು ಸ್ಥಳೀಯರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಕೊಲ್ಲೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ