ವರದಿ : ದಿನೇಶ್ ರಾಯಪ್ಪನಮಠ
ಕೋಟ: ರಾಷ್ಟ್ರೀಯ ಯುವ ದಿನ ಮತ್ತು ರಾಷ್ಟ್ರೀಯ ಯುವ ಸಪ್ತಾಹ 2022 ಸಮಾರೋಪ ಸಮಾರಂಭವು ಶ್ರಿ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೋಟೇಶ್ವರ ಇಲ್ಲಿ ಸಂಪನ್ನಗೊಂಡಿತು.
ಜೇಸಿ ಕುಂದಾಪುರ ಸಿಟಿಯ ಸಹಬಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇದರ ಅಧ್ಯಕ್ಷ ಅಭಿಲಾಷ ಬಿ. ಎ. ಮಾತನಾಡಿ ಯುವ ಜನತೆ ಇನ್ನಷ್ಟು ಜೀವನದಲ್ಲಿ ನವ ಚೇತನವನ್ನು ಅಳವಡಿಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆಕೊಟ್ಟರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ವಿಷಯಾಧಾರಿತ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಎರ್ಪಡಿಸುವ ಒಲವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಜೇಸಿಯ ರಾಷ್ಟ್ರೀಯ ತರಬೇತುದಾರ ವೇಣುಗೋಪಾಲರವರ “ ಥಿಂಕ್ ಬಿಗ್ ಎಂಡ್ ಗ್ರೋ ಬಿಗ್” ಎಂಬ ಶೀರ್ಷಿಕೆಯಡಿಯಲ್ಲಿನ ತರಬೇತಿ ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು. ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಆಲೋಚಿಸುವಾಗ ಯಾವುದೇ ಮಿತಿಗಳನ್ನು ಹೇರಿದೆ ಸ್ವತಂತ್ರವಾಗಿ ಆಲೋಚಿಸಿ, ಗುರಿ ನಿರ್ಧರಿಸಿ ಅದನ್ನು ತಲುಪಲು ಬದ್ಧತೆ ರೂಡಿಸಿಕೊಳ್ಳಬೇಕೆಂದು ತರಬೇತಿ ನೀಡುತ್ತಾ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2 ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಜೇಸಿ ಕುಂದಾಪುರ ಸಿಟಿಯ ಕಾರ್ಯದರ್ಶಿಗಳಾದ ಜೇಸಿ ಹುಸೇನ್ ಹೈಕಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿದ್ಧರು. ಯುವ ಸಪ್ತಾಹದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಬಹುಮಾನ ವಿಜೇತರ ಪಟ್ಟಿಯನ್ನು ಗ್ರಂಥಪಾಲಕರಾದ ರವಿಚಂದ್ರ ಹೆಚ್. ಎಸ್. ವಾಚಿಸಿದರು. ಕಾರ್ಯಕ್ರಮದಲ್ಲಿ ಐ. ಕ್ಯೂ. ಎ. ಸಿ. ಸಂಚಾಲಕರಾದ ನಾಗರಾಜ ಯು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಸಂತೋಷ ನಾಯ್ಕ ಹೆಚ್. ಉಪಸ್ಥಿತರಿದ್ಧರು. ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಮತ್ತು ದಿಪೀಕಾ ಪ್ರಾರ್ಥಿಸಿದರು. ಜಯಕರ ದ್ವೀತಿಯ ಬಿ. ಕಾಂ ಸ್ವಾಗತಿಸಿ, ರಶ್ಮಿತಾ ದ್ವೀತಿಯ ಬಿಬಿಎ ವಂದಿಸಿದರು. ಗಣೇಶ ಬಿ. ಎ. ದ್ವೀತಿಯ ಬಿ ಕಾಂ. ಕಾರ್ಯಕ್ರಮ ನಿರ್ವಹಿಸಿದರು. ನಿದೀಷ್ ಮತ್ತು ಹರ್ಷ ದ್ವೀತಿಯ ಬಿ ಕಾಂ ಕಾರ್ಯಕ್ರಮವನ್ನು ಸಂಘಟಿಸಿದರು.