ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನೆಹರು ಯುವ ಕೇಂದ್ರ ಉಡುಪಿ, ಗಾಯತ್ರಿ ಮಹಿಳಾ ಮಂಡಳಿ ದೊಂಡೇರಂಗಡಿ-ಕುಕ್ಕುಜೆ, ಶಾಂತಿನಿಕೇತನ ಕಡ್ತಲ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಯುವ ಸ್ವಾಸ್ಥ್ಯ, ಧನಾತ್ಮಕ ಜೀವನಶೈಲಿ ಮತ್ತು ಫಿಟ್ ಇಂಡಿಯಾ ತರಬೇತಿ ಕಾರ್ಯಗಾರವು ಭಾನುವಾರ ಶ್ರೀ ವಿಶ್ವಕರ್ಮ ಸಮಾಜ ಸಂಘ ದೊಂಡೇರಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠಲ್ ಶೆಟ್ಟಿ ಮಾತನಾಡಿ, ಒಳ್ಳೆಯ ಮನಸ್ಸಿನಿಂದ ದೇಶವನ್ನು ಕಟ್ಟಲು ಸಾಧ್ಯ. ನಮ್ಮ ಆಲೋಚನೆಗಳು, ಕೆಲಸ ಕಾರ್ಯಗಳು ಉದಾತ್ತವಾಗಿ ಒಳ್ಳೆ ಮನಸ್ಸಿನಿಂದ ಕೂಡಿದ್ದರೆ ಏನು ಬೇಕಾದರೂ ಸಾಧಿಸಬಹುದು. ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಒಳ್ಳೆ ಮನಸ್ಸಿನಿಂದ ಮಾಡುವ ಎಂದರು.
ಯೋಗ ಮಾಡುವುದರಿಂದ ಮಾನವ ದೈಹಿಕ ಮತ್ತು ಮಾನಸಿಕವಾಗಿ ಸದೃಢನಾಗಿ ಆರೋಗ್ಯವಂತರಾಗಿರುತ್ತಾನೆ. ಜೀವನಕ್ರಮದಲ್ಲಿ ವ್ಯಾಯಮ, ಆಹಾರ ಪದ್ಧತಿ, ಕ್ರೀಡಾ ಚಟುವಟಿಕೆ, ನಿದ್ದೆ ಹಾಗೂ ಧನಾತ್ಮಕ ಚಿಂತನೆಗಳು ಶಶಕ್ತ ಮಾನವನ್ನಾಗಿಸುತ್ತದೆ ಎಂದರು.
ಶಾಂತಿನಿಕೇತನ ಯುವ ವೃಂದದ ಲೋಗೋವನ್ನು ಸೀತಾನದಿ ವಿಠಲ ಶೆಟ್ಟಿ ಅನಾವರಣಗೊಳಿಸುವುದರ ಮೂಲಕ ನೂತನವಾಗಿ ರಚನೆಯಾದ ಶಾಂತಿನಿಕೇತನ ಕಡ್ತಲ ಘಟಕವನ್ನು ಉದ್ಘಾಟಿಸಿದರು.
ಶಾಂತಿನಿಕೇತನದ ಅಧ್ಯಕ್ಷ ರಾಜೇಶ್ ಮಾತನಾಡಿ ನಮ್ಮ ಸಂಘ ರಾಜ್ಯವ್ಯಾಪಿ ಮನ್ನಣೆ ಪಡೆದಿದೆ. ನೂತನವಾಗಿ ರಚನೆಯಾದ ಕಡ್ತಲ ಘಟಕದಲ್ಲಿ ನಿರಂತರ ಚಟುವಟಿಕೆಗಳು ನಡೆಯಲಿವೆ ಎಂದರು.
ಕಾರ್ಯಗಾರ:
ಯೋಗ ಮತ್ತು ಜೀವನಶೈಲಿಯ ಬಗ್ಗೆ ಸೀತಾನದಿ ವಿಠಲಶೆಟ್ಟಿ ನಡೆಸಿಕೊಟ್ಟರು. ಉತ್ತಮ ಆರೋಗ್ಯ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಆಳ್ವಾಸ್ ಆಯುರ್ವೇದ ಕಾಲೇಜಿನ ಮನೋರೋಗ ತಜ್ಞ ಡಾ. ರವಿಪ್ರಸಾದ್ ಹೆಗ್ಡೆ, ಭಾರತೀಯರಾದ ನಮ್ಮ ಮೂಲಭೂತ ಕರ್ತವ್ಯಗಳು ಮತ್ತು ಜವಾಬ್ದಾರಿಯ ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಕುಮಾರ್ ಹಾಗೂ ಯುವ ಜನತೆ ಮತ್ತು ಸಮಾಜದ ಬಗ್ಗೆ ಉಪನ್ಯಾಸಕ ನಾಗರಾಜ್ ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಕಾವ್ಯ ಪ್ರಭಾಕರ ಆಚಾರ್ಯ ವಹಿಸಿದ್ದರು. ಕಡ್ತಲ ಗ್ರಾಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಡ್ತಲ ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ, ದೊಂಡೇರಂಗಡಿ ವಿಶ್ವಕರ್ಮ ಬ್ರಾಹ್ಮಣ ಸಂಘದ ಅಧ್ಯಕ್ಷ ಈಶ್ವರ್ ಆಚಾರ್ಯ, ಶಾಂತಿನಿಕೇತನ ಕತ್ತಲ ಘಟಕದ ಸಂಚಾಲಕ ಶರತ್ ಆಚಾರ್ಯ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಸಂಪತ್, ವೈದ್ಯ ಪ್ರಮೋದ್ ಕುಮಾರ್ ಹೆಗ್ಡೆ ಹಾಗೂ ವಿವಿಧ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.