ಕಾಪು : ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪುನಃ ಆರಂಭಗೊಂಡಿದೆ.
ಇತ್ತೀಚೆಗೆ ವಾಹನ ಸಂಚಾರ ಜನದಟ್ಟಣೆ ಹೆಚ್ಚುತ್ತಿದ್ದು, ಕೆಲವೊಂದು ರಸ್ತೆಗಳನ್ನು ಅನಿವಾರ್ಯವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಅಗಲೀಕರಣ ಮಾಡಲಾಗುತ್ತಿದ್ದು,ಅದರಂತೆ ಕಳೆದ ಒಂದೂವರೆ ವರ್ಷಗಳ ಹಿಂದೆ ಉಚ್ಚಿಲ-ಮುದರಂಗಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು,ಮೋರಿ ನಿರ್ಮಿಸಿ,ರಸ್ತೆಯ ಇಕ್ಕೆಲಗಳಲ್ಲಿ ಅಗೆದು ಜಲ್ಲಿ ತುಂಬಿದ ಬಳಿಕ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ವಾಹನ ಸಂಚಾರಿಗಳು,ಪಾದಚಾರಿಗಳು ಬಹಳಷ್ಟು ಸಮಸ್ಯೆಗೊಳಗಾಗಿದ್ದರು.ಹಲವಾರು ಬಾರಿ ಈ ಬಗ್ಗೆ ಸಂಬಂಧಿತರಿಗೆ ದೂರು ನೀಡಲಾಗಿತ್ತು. ಇದೀಗ ಕಾಮಗಾರಿಗೆ ಮತ್ತೆ ಚಾಲನೆ ನೀಡುವ ಮೂಲಕ ಜನ ನಿಟ್ಟುಸಿರು ಬಿಡುವಂತಾಗಿದೆ.
ಈ ಬಗ್ಗೆ ಬೆಳಪು ಗ್ರಾ.ಪಂ ಮಾಜಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಬಹುಕಾಲದ ನಿರೀಕ್ಷೆಯ ಉಚ್ಚಿಲ-ಮುದರಂಗಡಿ ರಸ್ತೆ ಕಾಮಗಾರಿ ಮತ್ತೆ ಆರಂಭಗೊಂಡಿದೆ.ಈಗಾಗಲೇ ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್,ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ,ಪಾಲಿಟೆಕ್ನಿಕ್ ಕಾಲೇಜು ಕಾರ್ಯಾಚರಿಸುತ್ತಿದೆ. ಅದಕ್ಕೆ ಪೂರಕವಾಗಿ ಸಮರ್ಪಕವಾದ ರಸ್ತೆ ನಿರ್ಮಾಣಕ್ಕಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಆಡಳಿತಾವಧಿಯಲ್ಲಿ 9 ಮೀ.ರಸ್ತೆ ಅಗಲೀಕರಣಕ್ಕೆ ಸುಮಾರು 3 ಕೋಟಿ ರೂ. ಮಂಜೂರಾತಿ ಮಾಡಲಾಗಿತ್ತು.
ಇದೀಗ ಲಾಲಾಜಿ ಆರ್ ಮೆಂಡನ್ ರವರು ಶಾಸಕರಾದ ಬಳಿಕ ಮರು ಟೆಂಡರ್ ಕರೆಯಲಾಗಿದ್ದು,ರಸ್ತೆ ಅಗಲೀಕರಣದೊಂದಿಗೆ ಚರಂಡಿ, ಮೋರಿ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ತಿಗೊಳಿಸುವಂತೆ ಗುತ್ತಿದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.