ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕಾರ್ಕಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಚಿವ ಸುನೀಲ್ ಕುಮಾರ್ ಅವರ ಆಶಯದಂತೆ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ. ಮಾರ್ಚ್ 10 ರಿಂದ 20 ರವರೆಗೆ ಹತ್ತು ದಿನಗಳ ಕಾಲ ನಡೆವ ಅದ್ದೂರಿಯ ಕಾರ್ಕಳ ಉತ್ಸವದ ಪ್ರಯುಕ್ತ ಹಾಗೂ ಮಾರ್ಚ್ 12 ರಂದು ಹೆಬ್ರಿಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮಂಗಳವಾರ ಹೆಬ್ರಿ ಚೈತನ್ಯ ಸಭಾಂಗಣದಲ್ಲಿ ಹೆಬ್ರಿ ತಹಸೀಲ್ದಾರ್ ಪುರಂದರ್ ಕೆ. ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಹೆಬ್ರಿಯಲ್ಲಿ ಬೃಹತ್ ಉತ್ಸವ ಸ್ವಚ್ಛತೆ:

ಇಲಾಖೆ, ಶೈಕ್ಷಣಿಕ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹೆಬ್ರಿಯಲ್ಲಿ ಬೃಹತ್ ಉತ್ಸವ ಸ್ವಚ್ಛತೆ ಬೆಳಗ್ಗೆ 9 ರಿಂದ 11 ಗಂಟೆ ತನಕ ಜರುಗಲಿದೆ. ಸ್ವಚ್ಛತೆಯ ನಂತರ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಸ್ವಚ್ಛತೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ಸ್ವಚ್ಛತೆಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಹೆಚ್ ಗುರುದಾಸ್ ಶೆಣೈ ಹೇಳಿದರು.

ಸಭೆಯಲ್ಲಿ ನಾಳೆ ಹೆಬ್ರಿ ಪೇಟೆಯ ಪ್ರಮುಖ ರಸ್ತೆಯಲ್ಲಿ ಉತ್ಸವ ಸ್ವಚ್ಚತೆಯ ಬಗ್ಗೆ ಹಾಗೂ ಹನ್ನೆರಡು ರಂದು ಹೆಬ್ರಿಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಇಒ ಶಶಿಧರ್, ಪಿಎಸ್ಐ ಮಹೇಶ್, ಆರ್ ಫ್ ಒ ಗೌರವ್ ಹಾಗೂ ಪ್ರಮುಖರಾದ ಗುರುದಾಸ್ ಶೆಣೈ. ಸತೀಶ್ ಪೈ, ಹೆಬ್ರಿ ಗ್ರಾಪಂ ಅಧ್ಯಕ್ಷರು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ಶಾಲಾ ಕಾಲೇಜಿನ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಸ್ ವ್ಯವಸ್ಥೆ
ಹೆಬ್ರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರಿಗೂ ಅವಕಾಶ ದೊರಕುವ ಉದ್ದೇಶದಿಂದ ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆಯನ್ನು ಎಸ್ ಆರ್ ಶಿಕ್ಷಣ ಸಂಸ್ಥೆ, ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹಾಗೂ ಗೇರುಬೀಜ ಕಾರ್ಖಾನೆ ಮಾಲೀಕರ ಸಹಾಯದೊಂದಿಗೆ ಮಾಡಲಾಗುವುದು. ನಿಗದಿತ ಸ್ಥಳಕ್ಕೆ ಬಸ್ ಆಗಮಿಸಿ ಕರೆದುಕೊಂಡು ಹೋಗಿ ನಂತರದಲ್ಲಿ ವಾಪಸ್ ಬಿಡಲಾಗುವುದು.
ಹತ್ತುದಿನಗಳ ಕಾಲ ಹೆಬ್ರಿ ತಾಲೂಕಿನ ಪ್ರತಿಯೊಂದು ಮನೆ ಹಾಗೂ ಅಂಗಡಿಗಳನ್ನು ದೀಪಾಲಂಕರಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ಆಯೋಜಕರು ಸಭೆಯಲ್ಲಿ ಕೇಳಿಕೊಂಡರು.

ಹೆಬ್ರಿಯಲ್ಲಿ ಕಾರ್ಯಕ್ರಮ :
ಹೆಬ್ರಿಯಲ್ಲಿ ಫೆ.12 ರ ಶನಿವಾರದಂದು ಸಂಜೆ 6 ಗಂಟೆಯಿಂದ ಹೆಬ್ರಿ ಬಸ್ ನಿಲ್ದಾಣ ವಠಾರದಲ್ಲಿ 8.45ರ ತನಕ ಸ್ವರ ನಿನಾದ್ ಕೊಲ್ಲಾಪುರ ಮಹಾರಾಷ್ಟ್ರ ತಂಡ ಪ್ರಸ್ತುತಪಡಿಸುವ ದೇಶಭಕ್ತಿ ಗೀತೆಗಳ ಜಾಗೋ ಹಿಂದುಸ್ತಾನಿ, ಮಾತನಾಡುವ ಗೊಂಬೆ ಮತ್ತು ನೆರಳಿನಾಟ ಹಾಗೂ ರಾತ್ರಿ 9 ಗಂಟೆಯಿಂದ 10.30 ರ ತನಕ ಬಲೆ ತೆಲಿಪಾಲೆ ತುಳು ಹಾಸ್ಯಮಯ ನಾಟಕ ಜರಗಲಿರುವುದು.
ಅವಳಿ ತಾಲೂಕಿನಲ್ಲಿ ನಡೆಯುವ ಕಾರ್ಕಳ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಊರವರ ಸಹಕಾರದಿಂದ ನಡೆಯಬೇಕಾಗಿದೆ. ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ರೂಪುರೇಷೆ ಸಿದ್ಧಗೊಂಡಿದ್ದು ಹತ್ತು ದಿನಗಳ ಕಾಲ ನಡೆಯುವ ಉತ್ಸವ ಅತ್ಯಂತ ಯಶಸ್ವಿಯಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯುವ ಉತ್ಸವ ಆಗಬೇಕಾಗಿದೆ ಎಂದು ಹೆಬ್ರಿ ತಹಸೀಲ್ದಾರ್ ಪುರಂದರ ಹೇಳಿದರು.

