ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಮ್ಮಲ್ಲಿ ಈಗ ತುಳುಭಾಷೆಯು ಉಳಿದಿದೆ ಎಂದರೆ ಅದು ದೈವರಾಧನೆಯ ಕೊಡಿಯಡಿಯಿಂದ ಮಾತ್ರ. ಅಪೂರ್ವ ಕಾರಣೀಕ ಕ್ಷೇತ್ರವಾದ ತಿಂಗಳೆಯಿಂದಲೂ ತುಳು ಉಳಿಸುವ ಕೈಂಕರ್ಯದ ಜೊತೆಗೆ ಧರ್ಮ ಕಲೆ ಸಾಹಿತ್ಯೋತ್ಸವದ ಸೇವೆ ನಡೆಯುತ್ತಿದೆ. ಧರ್ಮ ಕಲೆಯ ಜೊತೆಗೆ ದೇಶವನ್ನು ಉಳಿಸುವ ನಡೆಯಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ತಿಂಗಳೆ ಗರಡಿಯಲ್ಲಿ ಮಂಗಳವಾರ ನಡೆದ ಧರ್ಮ ಕಲೆ ಸಾಹಿತ್ಯೋತ್ಸವದ ೬೧ನೇಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದುಗಳು ಎಂದೂ ಕೋಮುವಾದಿಗಳು ಆಗಲಿಲ್ಲ. ಸರ್ವಧರ್ಮ ಪರಿಪಾಲಕರು, ದೈವರಾಧನೆಯಲ್ಲಿ ಅಸ್ಪಷ್ಯತೆಯೂ ಇಲ್ಲ, ನ್ಯಾಯಲಯದಲ್ಲಿ ಇತ್ಯರ್ಥವಾಗದ ವ್ಯಾಜ್ಯಗಳನ್ನು ನ್ಯಾಯದಾನದ ಮೂಲಕ ತೀರ್ಪು ನೀಡಿದ ಹೆಗ್ಗಳಿಕೆ ದೈವರಾಧನೆಗೆ ಇದೆ, ದಕ್ಷಿಣ ಕನ್ನಡ ಸಹಿತ ಹಲವೆಡೆ ನೇಮೋತ್ಸವದಲ್ಲಿ ಮೊದಲು ಮೌಲಿಗಳಿಗೆ ಗೌರವ ನೀಡುವುದನ್ನು ನಾವು ಸ್ಮರಿಸಬಹುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಆಶೀರ್ವಚನ ನೀಡಿ ತಂತ್ರಗಳು ಇಲ್ಲದೆ ಬದುಕು ಇಲ್ಲ. ತಂತ್ರಗಳ ಸದ್ಬಳಕೆ ಆಗಬೇಕಿದೆ. ಭಕ್ತಿ ಮತ್ತು ಶಕ್ತಿಯ ಮೂಲಕ ಸಿದ್ಧಿಯನ್ನು ಪಡೆದು ಸಮಾಜದಲ್ಲಿ ತ್ಯಾಗ ಮತ್ತು ಉದಾರತೆಯಿಂದ ಸೇವೆಯನ್ನು ಮಾಡಬೇಕಿದೆ ಎಂದರು.
ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ತಿಂಗಳೆಯಲ್ಲಿ ಧರ್ಮ ಕಲೆಯ ಸೇವೆ ನಿರಂತರ ನಡೆಯುತ್ತಿದೆ ಎಂದು ಶುಭಹಾರೈಸಿದರು.
ನಾವು ಭೇದ ಮಾಡಿ ಆಧ್ಯಾತ್ಮದಲ್ಲಿ ಮುಳುಗಬಾರದು, ಪೂರ್ಣ ಮಾರ್ಗವೇ ನಮ್ಮ ತಂತ್ರ ಆಗಬೇಕು ಎಂದು ತಂತ್ರ ದರ್ಶನ ವಿಶೇಷ ಉಪನ್ಯಾಸದಲ್ಲಿ ಡಾ.ವೀಣಾ ಬನ್ನಂಜೆ ವಚನ ತಂತ್ರ ಬಗ್ಗೆ ಮಾತನಾಡಿದರು, ಪತ್ರಕರ್ತರಾದ ವಸಂತ ಗಿಳಿಯಾರು ಜೀವನ ತಂತ್ರ ಮತ್ತು ಶ್ರೀಕಾಂತ್ ಶೆಟ್ಟಿ ಆರಾಧನೆ ತಂತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಯಕ್ಷಮಾಣಿಕ್ಯ ಹೊನ್ನಾವರ ಮಾಳಕೋಡಿನ ಚಿಂತನ ಹೆಗಡೆ ಅವರನ್ನು ಗೌರವಿಸಲಾಯಿತು. ವಿವಿಧ ದೈವಗಳ ನೇಮೋತ್ಸವ ನಡೆಯಿತು. ದಿವಾಕರ ಪೂಜಾರಿ ಜಾರಿಗೆಕಟ್ಟೆ, ತಲ್ಲೂರು ಶಿವರಾಮ ಶೆಟ್ಟಿ, ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಕೆಳಚಾವಡಿ ಪ್ರಕಾಶ ಶೆಟ್ಟಿ, ಕೆಳಚಾವಡಿ ಅಣ್ಣಪ್ಪ ಶೆಟ್ಟಿ, ಸುಚರಿತಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸ್ವಾಗತಿಸಿದರು.