ಲೇಖಕ : ಗಣೇಶ್ ರಾಜ್ ಸರಳೇಬೆಟ್ಟು
ಉಡುಪಿ : ಹಾವಂಜೆ ಗ್ರಾಮದ ಕೀಳಂಜೆಯ ಹರಿಹರ ಸನ್ನಿಧಿಯಾದ ಶ್ರೀ ಮಹಾವಿಷ್ಣು ಮಾಲಿಂಗೇಶ್ವರ ದೇವಸ್ಥಾನದ ಕೆರೆಯು ವರ್ಷದ 365 ದಿನವೂ ನೀರು ತುಂಬಿ ತುಳುಕುತ್ತಿರುತ್ತದೆ. ಸಾಕ್ಷಾತ್ಕಾರ ಗಂಗೆಯೆ ಇಳಿದು ಬಂದಂತೆ ನಿತ್ಯವೂ, ಕೆರೆ (ಪುಷ್ಕರಣಿ) ತುಂಬಿ ತುಳುಕುತ್ತದೆ. ಈ ನೀರು ನಂತರ ಮುಂದೆ ಸಾಗಿ ಕೀಳಂಜೆಯ ಗದ್ದೆಯ ಪರಿಸರದಲ್ಲಿ ಇಂಗಿಹೋಗುತ್ತದೆ. ಆದರೂ ಕೆಲ ಹತ್ತಿರ ಪ್ರದೇಶದಲ್ಲಿರುವ ಬಾವಿಗಳಲ್ಲಿ ನೀರು ಕಡಿಮೆ ಇರುತ್ತದೆ ಹಾಗೂ ಮೇ ತಿಂಗಳಲ್ಲಿ ನೀರು ಬತ್ತಿ ಹೋಗುತ್ತದೆ. ಆದರೂ ಈ ದೇವಸ್ಥಾನವೂ ಪ್ರಕೃತಿಯ ಮಡಿಲಲ್ಲಿದ್ದು, ಎತ್ತರವಾದ ಪ್ರದೇಶದಲ್ಲಿ ಹರಿಹರ ಸನ್ನಿಧಿ ಇದ್ದರೂ ಕೂಡ ನೀರು ಬತ್ತದೆ ಇರುವುದು, ಪವಾಡವೇ ಅನ್ನಬಹುದು. ದೇವಸ್ಥಾನದ ಹಿಂಬದಿ ಅತಿ ಹೆಚ್ಚು ನೀರು ಹೀರುವ ಅಕೇಶಿಯ ಮರವನ್ನು ಸಾಲುಸಾಲಾಗಿ ಯಥೇಚ್ಛವಾಗಿ ಅರಣ್ಯ ಇಲಾಖೆ ಬೆಟ್ಟದಲ್ಲಿ ಬೆಳೆಸಿದ್ದಾರೆ.
ಇತ್ತೀಚೆಗೆ ದೇವಸ್ಥಾನಕ್ಕೆ ಹೋಗಲು ನೂತನ ರಸ್ತೆಯಾಗಿದ್ದು, ಪ್ರಕೃತಿ ಮಡಿಲಲ್ಲಿರುವ ಈ ದೇವಸ್ಥಾನವನ್ನು ಕಣ್ತುಂಬ ನೋಡಬಹುದು. ಈ ದೇವಸ್ಥಾನಕ್ಕೆ ಮಣಿಪಾಲ ಶ್ರೀಂಬ್ರ ಹೊಸ ಸೇತುವೆ ಮೂಲಕವೂ ಬರಬಹುದು. ಕೊಳಲಗಿರಿ ಹಾವಂಜೆ ಕೀಳಂಜೆಯ ಮೂಲಕವೂ ಹರಿಹರ ಸನ್ನಿಧಿಯನ್ನು ಸಂಪರ್ಕಿಸಲು ಮೂರು ಕೋಟಿ 40 ಲಕ್ಷ ನೂತನ ರಿಂಗ್ ರಸ್ತೆ ರಚನೆಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಿ ಈ ದೇವಸ್ಥಾನವನ್ನು ನೋಡಬಹುದು.. ಒಟ್ಟಿನಲ್ಲಿ 365 ದಿನವೂ ನಿತ್ಯ ನೀರು ಹರಿಯುವುದು ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿದೆ,