ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಪೊಲೀಸ್ ವ್ಯವಸ್ಥೆಗೆ ಒಳ್ಳೆಯ ಹೆಸರಿತ್ತು. ಬಿಜೆಪಿ ಸರ್ಕಾರದ ದುರಾಡಳಿತ ಮತ್ತು ಲಂಚಾವತಾರದಿಂದ ಕೆಟ್ಟ ಹೆಸರು ಬಂದು ಎಲ್ಲರೂ ನಂಬಿಕೆ ಕಳೆದು ಕೊಳ್ಳುವಂತಾಗಿದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯಲ್ಲೂ ಭಾರೀ ಭ್ರಚ್ಟಾಚಾರ ನಡೆಯುತ್ತಿದೆ. ಜನಸಾಮಾನ್ಯರು ಯಾರೂ ಕೂಡ ಸರ್ಕಾರಿ ಹುದ್ದೆಯನ್ನು ಪಡೆಯುವಂತೆಯೇ ಇಲ್ಲ. ಪಿಎಸ್ಐ ನೇಮಕ ಹಗರಣದಲ್ಲಿ ಮುಖ್ಯಮಂತ್ರಿಯವರು ಮಾತೇ ಆಡುತ್ತಿಲ್ಲ. ಹಾಗಾದರೇ ಭ್ರಷ್ಟಾಚಾರವೇ ಬಿಜೆಪಿಯವರ ಶಿಷ್ಟಾಚಾರವೇ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದರು.
ಅವರು ಸೋಮವಾರ ಹೆಬ್ರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಯವರೇ ಲಂಚ ಪಡೆದು ಪಿಎಸ್ಐ ಹುದ್ದೆಯ ಆಸೆ ತೋರಿಸಿದ್ದಾರೆ. ಹುದ್ದೆಯ ಆಸೆ ಪಡೆದ ಆಕಾಂಕ್ಷಿಗಳು ಮತ್ತು ಪೋಷಕರು ಈಗ ಮುಖ ಮುಚ್ಚಿಕೊಂಡು ಜೈಲು ಸೇರುವಂತಾಗಿದೆ. ಅಮಾಯಕರಿಗೆ ಅನ್ಯಾಯವಾಗಿದೆ. ಇವರ ಕಣ್ಣೀರು ಕೇಳುವವರು ಯಾರು? ಉಡುಪಿ ಜಿಲ್ಲೆಯಲ್ಲೂ ಹಲವರು ಪರೀಕ್ಷೆ ಬರೆದಿದ್ದಾರೆ. ಇಲ್ಲೂ ಹುದ್ದೆಯ ಆಸೆ ತೋರಿಸಿ ಪರೀಕ್ಷೆ ಬರೆಸಿರಬಹುದು. ಉಡುಪಿ ಜಿಲ್ಲೆಯ ಕಿಂಗ್ ಪಿನ್ ಯಾರು ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ಸಚಿವರು ಮೇಲೂ ನಮಗೆ ಸಂಶಯವಿದೆ. ನಮ್ಮ ಜಿಲ್ಲೆಯಲ್ಲಿ ೧೦೦ ಶೇಕಡಾ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ದೂರಿದರು.
ಭ್ರಷ್ಟ ಸರ್ಕಾರ ತೊಲಗಬೇಕು, ರಾಜ್ಯಪಾಲರ ಆಡಳಿತ ಜಾರಿಗೆ ಬರಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಸರಿ ಮಾಡುತ್ತೇವೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಚುನಾವಣೆ ಹತ್ತಿರ ಬರುವಾಗ ಹೇಳುತ್ತಾರೆ ಮತ್ತೇ ಅದರ ಗೋಜಿಗೆ ಹೋಗುವುದಿಲ್ಲ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ರಾಜಕೀಯ ನೈತಿಕತೆ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ನಿರಂತರ ಹಗರಣ, ಭ್ರಷ್ಟಚಾರ, ಜನವಿರೋಧಿ ನೀತಿಗಳಿಂದ ಜನ ರೋಸಿ ಹೋಗಿದ್ದಾರೆ. ಬಿಜೆಪಿ ಸರ್ಕಾರ ಬಿಜೆಪಿಯವರಿಗೆ ಬೇಡವಾಗಿದೆ. ಅಷ್ಟೂ ಕೆಟ್ಟ ಸರ್ಕಾರ ಎಂದು ದೂರಿದರು.
ಹೆಬ್ರಿ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಪ್ರಮುಖರಾದ ಶಶಿಕಲಾ ಪೂಜಾರಿ, ಹೆಚ್.ಬಿ.ಸುರೇಶ್, ಸುಧಾಕರ ಶೆಟ್ಟಿ, ಜಲಂಧರ ಹೆಬ್ಬಾರ್, ಹರೀಶ ಕುಲಾಲ್, ಭೋಜ ಪೂಜಾರಿ ಹಾಜರಿದ್ದರು.