ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಓದು ಬರಹ ಮಾತ್ರ ಶಿಕ್ಷಣ ಅಲ್ಲ ಜೀವನ ಮೌಲ್ಯ ನಿಜವಾದ ಶಿಕ್ಷಣ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಭಾನುವಾರ ಬಾರಕೂರು ಮೂಡುಕೇರಿ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಸರಸ್ವತಿನಾರಾಯಣೀ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ದೇವಸ್ಥಾನ, ಮಠ, ಮಂದಿರದಿಂದ ಮಾತ್ರ ಸಮಾಜ ಒಗ್ಗೂಡಲು ಸಾಧ್ಯ. ಮುಂದಿನ ಜನಾಂಗವಾದ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ. ಉತ್ತಮ ಗುಣ ನಡತೆಯ ಪಾಠ ಮನೆಯಲ್ಲಿ, ಮಂದಿರದಲ್ಲಿ ತಿಳಿಸಿರಿ ಎಂದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಮೋಹನ್ ಆಳ್ವ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ಮನೆ, ಮನಗಳಲ್ಲಿ ಸಂಬಂಧಗಳ , ಮಾನವೀಯ ಮೌಲ್ಯಗಳ ಕಂದಕಗಳು ಹೆಚ್ಚುತ್ತಿದ್ದು, ಅದನ್ನು ತೊಡೆದು ಹಾಕಲು ಪ್ರತಿ ಸಮುದಾಯ, ಜನಾಂಗ ಪ್ರಯತ್ನಿಸಬೇಕು ಎಂದರು.
ಶ್ರೀ ಸರಸ್ವತಿನಾರಾಯಣೀ ಸೇವಾ ಸಮಾಜ ಸಂಘದ ಎಂ. ಗೋವಿಂದ ನಾಯಕ್ ಅಧ್ಯಕ್ಷ್ಷತೆ ವಹಿಸಿದ್ದರು.
ಅತಿಥಿಗಳಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ , ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕಿಣಿ, ದೇವಸ್ಥಾನದ ಆಡಳಿತ ಮೋಕ್ತೇಸರ ಶಂಕರ ನಾಯಕ್ , ಇಂಗ್ಲೆಂಡ್ನ ಇಂಜಿನಿಯರ್ ರವಿ ಕೆ.ಎನ್. ನಾಯಕ್, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಯುವ ಪೇ ಎಂಡಿ ಪ್ರಶಾಂತ್ ನಾಯಕ್ ಬ್ರಹ್ಮಾವರ, ಹನೆಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಬಿ. ಸೀತಾರಾಮ ಶೆಟ್ಟಿ, ಪ್ರಮುಖರಾದ ಡಾ| ಮಂಜುನಾಥ ಸೋಮಯಾಜಿ, ಗೋವಿಂದ ನಾಯಕ್ ನಾಯ್ಕನಕಟ್ಟೆ, ಸುರೇಶ್ ನಾಯಕ್ ಪರ್ಕಳ, ವಿಧುಶೇಖರ್ನಾಯಕ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ನೆರವಾದ ದಾನಿಗಳನ್ನು ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಚಂದ್ರ ನಾಯ್ಕ್ ಗೋಳಿಹೊಳೆ ಸ್ವಾಗತಿಸಿ, ಸುಧಾಕರ ನಾಯಕ್ ವಂದಿಸಿ, ರತ್ನಾಕರ ನಾಯಕ್, ರಾಘವೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.