ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ ; ಶಿಕ್ಷಕ ಸೀತಾನದಿ ಭೋಜ ಶೆಟ್ಟಿ ಮತ್ತು ಅವರ ಸಂಬಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ ಯನ್ನು ಮಂಗಳವಾರ ಚಿಕ್ಕಮಗಳೂರಿನಿಂದ ಸಿಒಡಿ ಪೊಲೀಸರು ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಸೀತಾನದಿ ಕರೆತಂದು ಹತ್ಯೆ ನಡೆದ ಸ್ಥಳ ಮಹಜರು ನಡೆಸಿದರು.
2008ರ ಇಸವಿಯಲ್ಲಿ ರಾತ್ರಿ 8.30 ರ ಹೊತ್ತಿಗೆ ಶಿಕ್ಷಕ ಭೋಜ ಶೆಟ್ಟಿ ಅವರ ಸಂಬಂಧಿಕ ಸುರೇಶ್ ಶೆಟ್ಟಿ ಅವರು ಬೈಕ್ ನಲ್ಲಿ ಮನೆಗೆ ಹೋಗುವಾಗ ಶಿಕ್ಷಕ ಭೋಜ ಶೆಟ್ಟಿ ಅವರ ಮನೆಯ ಗೇಟ್ ಬಳಿ ನಕ್ಸಲರು ದಟ್ಟ ಕಾಡಿನ ನಡುವೆ ಹಿಂದಿನಿಂದ ಬಂದೂಕಿನಿಂದ ಗುಂಡು ಹಾರಿಸಿ ಇಬ್ಬರನ್ನು ಹತ್ಯೆ ಮಾಡಿದ್ದರು. ಈ ಕೃತ್ಯದ ರೂವಾರಿ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಎಂದು ಶಂಕಿಸಲಾಗಿದೆ.
ಈತನ ಮತ್ತು ತಂಡದ ಕೆಲವು ಸದಸ್ಯರ ಮೇಲೆ ಕೇಸು ದಾಖಲಾಗಿ, ಕಳೆದ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ತನಿಖೆಯ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬಿ.ಜಿ.ಕೃಷ್ಣಮೂರ್ತಿ ಈತನನ್ನು ಚಿಕ್ಕಮಗಳೂರು ಜೈಲಿನಿಂದ ಸಿಒಡಿ ತನಿಖಾಧಿಕಾರಿ ಡಿ.ವೈ.ಎಸ್ .ಪಿ ..ಡಿ. ಪಿ ಪ್ರಸಾದ್ ಮತ್ತು ಅವರ ತಂಡ ಸೀತಾನದಿಗೆ ಆಗಮಿಸಿ ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸಿದರು.
ಎನ್. ಎಫ್ ಪೊಲೀಸ್ ನಿರೀಕ್ಷಕ ಸತೀಶ್ , ಪೊಲೀಸ್ ಅಧಿಕಾರಿಗಳಾದ ಹೆಬ್ರಿ ಎಸ್ಸೈ ಸುದರ್ಶನ್ ದೊಡ್ಮನಿ ANF, ಪಿಎಸ್ ಐ ವಸಂತ್ ಹಾಗೂ ಪೊಲೀಸ್ ಮತ್ತು ಎಎನ್ ಎಫ್ ಸಿಬ್ಬಂದಿಗಳು ಹಾಜರಿದ್ದರು.
ಹತ್ಯೆಗೀಡಾದ ಶಿಕ್ಷಕ ಭೋಜ ಶೆಟ್ಟಿ ಅವರ ಪುತ್ರ ಸೀತಾನದಿ ವಿಜಯ ಶೆಟ್ಟಿ ಘಟನೆಯ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರು ಮತ್ತು ತಪ್ಪಿತಸ್ಥ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ತನಿಖೆಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಭೋಜ ಶೆಟ್ಟಿ ಹತ್ಯೆಗೆ ಸಂಬಂಧಿಸಿದ ಈ ಹಿಂದೆ ಬಂಧಿತನಾಗಿದ್ದ ನಕ್ಸಲ್ ವೀರಮಣಿಯ ಹೇಳಿಕೆಯಂತೆ ಭೋಜ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ ಈದು ಸಮೀಪ ಕನ್ಯಾಲಿನಲ್ಲಿ ಬೆಳಗ್ಗೆ ಮಹಜರು ನಡೆಸಲಾಯಿತು.