ಲೇಖಕಿ : ವಾಸಂತಿ ಅಂಬಲಪಾಡಿ
ಪ್ರಥಮ ಪಿಯುಸಿಯಲ್ಲಿ ಇದ್ದ ನಾನು ಆಗಷ್ಟೇ ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಆಗ ಸಾಹಿತ್ಯದಲ್ಲಿ ಸಾಧನೆ ಮಾಡಿದ ದೊಡ್ಡ ಸಾಹಿತಿಗಳನ್ನು ಬಿಟ್ಟರೆ ನನ್ನಂತೆ ಬಾಲಂಗೋಚಿ ಸಾಹಿತಿಗಳ ಸಂಖ್ಯೆ ತೀರಾ ಕಡಿಮೆ. ಯಾವುದೇ ಸಾಹಿತ್ಯಿಕ ಹಿನ್ನೆಲೆಯಿಲ್ಲದ ಕುಟುಂಬದಲ್ಲಿ ಹುಟ್ಟಿದ ನಾನು ಅಂತರ್ ಕಾಲೇಜು ಮಟ್ಟ, ರಾಜ್ಯಮಟ್ಟ ಜಿಲ್ಲಾ ಮಟ್ಟದ ಬಹುಮಾನಗಳನ್ನು ಗಳಿಸಿರುವುದರ ಜೊತೆಗೆ ಆಕಾಶವಾಣಿ ಮಂಗಳೂರಿನಲ್ಲಿ ಆಗಾಗ ನನ್ನ ಕಥೆ ಕವನಗಳ ಪ್ರಸಾರವಾಗುತಿತ್ತು. ಇದ್ದ ಬೆರಳೆಣಿಕೆಯ ಪತ್ರಿಕೆಗಳಲ್ಲಿ ಕಥೆ, ಕವನ ಪ್ರಕಟವಾಯಿತೆಂದರೆ ನೊಬೆಲ್ ಪ್ರಶಸ್ತಿ ಗಳಿಸಿದಷ್ಟು ಖುಷಿ. ಹೀಗೆ ವಿದ್ಯಾರ್ಥಿ ಸಾಹಿತಿಯಾಗಿ ಗುರುತಿಸಿಕೊಳ್ಳುತ್ತಿದ್ದ ಆ ಕಾಲದಲ್ಲಿ ಪರಿಚಯವಾದವರೇ ಕು.ಗೋ ಎಂಬ ವಿಶಿಷ್ಟವಾದ ವ್ಯಕ್ತಿ . ಆಗ ತಾನೇ ನಿವೃತ್ತಿ ಹೊಂದಿದ್ದ ಕು.ಗೋ ಸುಹಾಸಂ ಲೇಖಕರ ಸಂಘಟನೆಗೊಂದು ತಳಪಾಯ ಹಾಕುತಿದ್ದರು. ಹಲವಾರು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಕಿವಿಯಾಗುತಿದ್ದ ನನ್ನ ಸಾಹಿತ್ಯ ಅಭಿರುಚಿಯನ್ನು ಗಮನಿಸಿ ” ಬರೆದಿಟ್ಟದ್ದನ್ನು ಹಾಗೇ ಇಡಬೇಡ. ಒಂದು ಪುಸ್ತಕ ಮಾಡು” ಎಂದು ಹೇಳಿದ್ದು ಮಾತ್ರವಲ್ಲ, ಟಿ.ಜಿ.ಭಟ್ ಹಾಸಣಗಿ ಎನ್ನುವ ಲೇಖಕರಿಂದ ತಾವೇ ಮುತುವರ್ಜಿಯಿಂದ ಬರೆಸಿಕೊಟ್ಟವರು ಇದೇ ಸಾಹಿತ್ಯ ಸಂತ. ಅಲ್ಲಿಯವರೆಗೆ ನಾನೂ ಕೂಡಾ ಪುಸ್ತಕ ಮಾಡಬಲ್ಲೆ ಎಂಬುದನ್ನು ಯೋಚನೆ ಮಾಡದಿದ್ದ ನನ್ನಿಂದ ಒಂದು ಕೃತಿಯೂ ಹೊರಬಂತು.
ನಿಜವಾಗಿ ಹೇಳಬೇಕೆಂದರೆ ಪದವಿ ಮುಗಿದ ತಕ್ಷಣ1997 ರಲ್ಲಿ ಪ್ರಕಟಗೊಂಡ ‘ಹಕ್ಕಿಯ ಮೊದಲ ಹಾಡು’ ಅನ್ನುವ ಕವನಸಂಕಲನದ ಬಿಡುಗಡೆಯ ಮೂಲ ಪ್ರೇರಕ ಶಕ್ತಿ ಕು.ಗೋ. ಇವತ್ತು ನಾನೂ ಕೂಡಾ ಸಾಹಿತಿ ಎಂದು ಈಗಿನವರು ಗುರುತಿಸಿದ್ದಾರೆ ಎಂದರೆ ಆ ಹೆಸರು ನಿಜವಾಗಿಯೂ ಕು.ಗೋ ಅವರಿಗೆ ಸಲ್ಲುತ್ತದೆ. ಆ ನಂತರ 2002 ರಲ್ಲಿ ತಾರೆಗಳ ಪಿಸು ಮಾತು ಎಂಬ ಕವನ ಸಂಕಲನ ಸುಹಾಸಂ ವೇದಿಕೆಯಿಂದಲೇ ಕು.ಗೋ ಅವರ ಪ್ರೇರಣೆಯಿಂದಲೇ ಬಿಡುಗಡೆಗೊಂಡಿತು. ನಂತರವೂ ‘ನನ್ನಮ್ಮ ನಿನ್ನಮ್ಮನಂತಲ್ಲ’ ಎಂಬ ಕವನ ಸಂಕಲನಕ್ಕೆ ಸ್ವತಃ ಕು.ಗೋ ಅವರೇ ಮುನ್ನುಡಿ ಬರೆದಿರುವುದು ನನ್ನ ಹೆಮ್ಮೆ.
ಆ ನಂತರವೂ ಸಿಕ್ಕಿದಾಗಲೆಲ್ಲ ” ಬರೆದದ್ದು ಹಾಗೇ ಇಟ್ಟುಕೊಳ್ಳ ಬೇಡ. ಪುಸ್ತಕ ಮಾಡು” ಅನ್ನುವ ನಿಷ್ಕಲ್ಮಶ ಮನಸ್ಸಿನ ಕು.ಗೋ ತೀರಾ ಆತ್ಮೀಯರಾಗಿ ಬಿಡುತ್ತಾರೆ. ಜೊತೆಗೆ ಒಂದಿಷ್ಟು ಪುಸ್ತಕ ಕೈಗಿಟ್ಟು ಬಿಡುವ ಈ ನಿಸ್ವಾರ್ಥ ಹೃದಯದ ಕು.ಗೋ ಮನದೊಳಗೆ ದುಃಖ ವಿದ್ದರೂ ನಗಿಸುವ ಹಾಸ್ಯ ಹೃದಯದವರೂ ಹೌದು. ಚಿಕ್ಕವಳಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದ ನಾನು ತಂದೆಯ ಪ್ರೀತಿಯನ್ನು ಇವರಲ್ಲಿ ಕಂಡಿದ್ದೇನೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಂದಿನಿಂದ ಇಂದಿನವರೆಗೂ ಪ್ರೋತ್ಸಾಹ ನೀಡುತ್ತಲೇ ಬಂದಿರುವ ಕು.ಗೋ ನೂರು ವರ್ಷ ಬಾಳಲಿ. ಅವರಿಗೆ ಆಯುರಾರೋಗ್ಯ ನೆಮ್ಮದಿಯನ್ನು ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ಅಮ್ಮ ಅನುಗ್ರಹಿಸಲಿ.