ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಎಸ್.ಡಿ.ಪಿ. ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಹೆಣ್ಣು ಮಕ್ಕಳಿಗೆ ಉಚಿತ ರಕ್ತಚಂದನ ಗಿಡಗಳ ವಿತರಣೆ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕಳೆದ 10 ವರ್ಷದಿಂದ ಹಸಿರು ಬೆಳೆಸುವ ಮನೋಭಾವದಿಂದ, ಭವಿಷ್ಯದಲ್ಲಿ ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವ ಆಶಯದೊಂದಿಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಸತೀಶ್ ಬಿ. ಶೆಟ್ಟಿ ಕಾಡೂರು ತಿಳಿಸಿದ್ದಾರೆ.
5 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಷಕರಿಗೆ ಉಚಿತವಾಗಿ 15 ರಕ್ತಚಂದನ ಗಿಡಗಳನ್ನು ವಿತರಿಸಲು ತೀರ್ಮಾನಿಸಿದ್ದು,ಪ್ರತಿ ಮಗುವಿಗೆ ನೀಡುವ ರಕ್ತಚಂದನ ಗಿಡಗಳು ಮುಂದಿನ 15 ವರ್ಷಗಳಲ್ಲಿ ಉತ್ತಮ ಬೆಲೆ ಬಾಳುವ ಮರಗಳಾಗುತ್ತವೆ. ಇದರಿಂದ ಬರುವ ಮೊತ್ತವು ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ನೆರವಾಗಲಿದೆ.
ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳುವುದರಿಂದ ತನ್ನ ಮಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವುದರ ಜತೆಗೆ, ಹಸಿರು ಉಳಿಸುವ ಸಂಸ್ಥೆಯ ಯೋಜನೆಯಲ್ಲಿ ಪಾಲ್ಗೊಂಡಂತಾಗುತ್ತದೆ.
ಸಂಸ್ಥೆಯು ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ನಾನಾ ಭಾಗದ ರೈತರು 300ಎಕರೆ ಜಾಗದಲ್ಲಿ 1,00,000ಕ್ಕೂ ಮಿಕ್ಕಿ ರಕ್ತಚಂದನ ಗಿಡಗಳನ್ನು ಬೆಳೆಸುವಲ್ಲಿ ಸಹಕರಿಸಿದೆ.
5 ವರ್ಷದೊಳಗಿನ ಹೆಣ್ಣು ಮಗುವಿನ ಪೋಷಕರು ಗಿಡ ನೆಡಲು ತೀರ್ಮಾನಿಸಿದ ಸ್ಥಳದ ಆರ್. ಟಿ.ಸಿ, ಮಗುವಿನ ಭಾವಚಿತ್ರ ಮತ್ತು ಜನನ ಪ್ರಮಾಣ ಪತ್ರದ ನಕಲು ಪ್ರತಿಯೊಂದಿಗೆ ನೀಲಾವರ ಎಳ್ಳಂಪಳ್ಳಿ, ತಡೆಗಲ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಸಂಸ್ಥೆಯ ಕಚೇರಿಯನ್ನು ಜೂ.30ರ ಒಳಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ: 9860705863 ಸಂಪರ್ಕಿಸುವಂತೆ ಸಂಸ್ಥೆಯು ತಿಳಿಸಿದೆ.
