ಅಡ್ಯನಡ್ಕ : ಸಾಮಾನ್ಯವಾಗಿ ಗಡಿ ನಾಡಿನ ಸಮಸ್ಯೆ ಎಂದರೆ ಅದೊಂದು ಬಗೆ ಹರಿಯದ ಸಮಸ್ಯೆ. ಒಬ್ಬ ವ್ಯಕ್ತಿಗೆ ವಾಸಿಸಲು ಯೋಗ್ಯ ಮನೆ ಹೇಗೆ ಬೇಕೋ ಹಾಗೆಯೇ ಮನೆಗೆ ಹೋಗುವ ದಾರಿಯೂ ಅಷ್ಟೇ ಮುಖ್ಯ. ಆದರೆ, ಕೇರಳ – ಕರ್ನಾಟಕ ಗಡಿಯಲ್ಲಿರುವ ಎಣ್ಮಕಜೆ ಗ್ರಾಮದ ಅಡ್ಯನಡ್ಕ ಎಂಬಲ್ಲಿ ಇದೊಂದು ಬಗೆ ಹರಿಸಲು ಸಾಧ್ಯವಾಗದೆ ಉಳಿದಿರುವ ಸಮಸ್ಯೆ. ಯಾವುದೇ ವಾಹನಗಳು ಸಂಚರಿಸಲು ಆಗದೆ ಉಳಿದಿರುವ ದಾರಿ ಮಾತ್ರ ಇದೆ. ಅಡ್ಯನಡ್ಕ ಪೇಟೆಗೆ ತಲುಪಬೇಕೆಂದರೆ ಸುಮಾರು ಒಂದು ಕಿಲೋ ಮೀಟರ್ ನಷ್ಟು ದೂರ ನಡೆಯಬೇಕು. ತಮ್ಮ ತಮ್ಮ ಮನೆಯಿಂದ ಪೇಟೆಗೆ ಹೋಗಬೇಕೆಂದರೆ ಕನಿಷ್ಠ ಪಕ್ಷ ನಡೆಯುವ ದಾರಿ ಆದರೂ ಸುಗಮವಾಗಿರಬೇಕು.
ಆದರೆ, ಇಲ್ಲಿ ಒಬ್ಬ ವ್ಯಕ್ತಿ ಅಸ್ವಸ್ಥತೆಯಿಂದ ಬಳಲಿ ಆಸ್ಪತ್ರೆಗೆ ಹೋಗಬೇಕೆಂದರೆ ದ್ವಿಚಕ್ರ ವಾಹನದಲ್ಲಾದರೂ ಕರೆದುಕೊಂಡು ಹೋಗುವಂತಿಲ್ಲ. ಆತ ನಡೆದೇ ಹೋಗಬೇಕು. ಇಲ್ಲವೇ ಯಾರಾದರೂ ಹೊತ್ತುಕೊಂಡು ಹೋಗಬೇಕು. ಇಂತಹ ದುಸ್ಥಿತಿಯಲ್ಲಿರುವ ರಸ್ತೆಯನ್ನು ಯಾರೂ ತಿರುಗಿ ನೋಡದೇ ಇರುವುದು ಗ್ರಾಮಸ್ಥರಿಗೆ ತೀರಾ ನೋವಿನ ವಿಚಾರ.
ಇದು 50 ವರ್ಷದ ಗೋಳು :
ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಹೇಳ ತೀರದು. ದಿನ ಕಳೆದಂತೆ ಇಲ್ಲಿ ನಡೆದಾಡುವ ಮಣ್ಣಿನ ದಾರಿಯೂ ಸಂಚಾರಕ್ಕೆ ಯೋಗ್ಯವಲ್ಲದಂತೆ ಆಗಿದ್ದು, ದೈನದಿಂದ ಸಂಚಾರಕ್ಕೂ ತೊಂದರೆ ಆಗುತ್ತಿದೆ. ಜನರು ಸುರಕ್ಷಿತವಾಗಿ ಇರಬೇಕೆಂದರೆ ಅಲ್ಲಿ ಸರಕಾರದ ಪಾತ್ರವು ಮಹತ್ವದ್ದು, ಸುಮಾರು 50 ವರ್ಷಗಳಿಂದ ಈ ವಿಷಯದ ಪರವಾಗಿ ಗ್ರಾಮಸ್ಥರು ದನಿ ಎತ್ತಿದರೂ, ಸಹಾಯ ಯಾಚಿಸಿದರೂ, ಹೋರಾಡಿದರೂ ಇದುವರೆಗೂ ಯಾವುದೇ ರೀತಿಯ ಪರಿಹಾರ ಜನ ನಾಯಕರಿಂದಲೋ, ಸರಕಾರದಿಂದಲೋ ಲಭಿಸದೆ ಇರುವುದು ವಿಷಾದಕರ ಸಂಗತಿ.
ಸರಿಯಾದ ರಸ್ತೆ ಸೌಲಭ್ಯವಿಲ್ಲದೇ ವರ್ಷಗಳಿಂದ ಅನುಭವಿಸುವ ಈ ದುಸ್ಥಿತಿಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಲು ಇನ್ನಾದರೂ ಜನ ನಾಯಕರೋ, ಸರಕಾರವೋ ಮುಂದಾಗಲೇ ಬೇಕಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದನೆ ಅತೀ ಅಗತ್ಯವಾಗಿದೆ.