ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ಪೊಲೀಸರು ಕಾರ್ಯಚರಣೆ ನಡೆಸಿ ಕುಖ್ಯಾತ ಅಂತರ್ ರಾಜ್ಯ ಮನೆ ಕಳ್ಳರನ್ನು ಬಂಧಿಸಿದ್ದಾರೆ.
ಹೆಬ್ರಿಯ ಶಿವಪುರದ ದಿಲೀಪ್ ಶೆಟ್ಟಿ, ತಮಿಳುನಾಡಿನ ರಾಜನ್ ತಂದೆ, ಷಣ್ಮುಗಂ ಬಂಧಿತ ಕಳ್ಳರು. ಚಿನ್ನಾಭರಣ ಹಾಗೂ 2 ಕಾರು ಸಮೇತ 20 ಲಕ್ಷ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿಲೀಪ್ ಶೆಟ್ಟಿ ಎಂಬಾತನು ಸ್ಯಾಂಟ್ರೋ ಕಾರು ಮತ್ತು ಓಮಿನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ಕಾರಿನಲ್ಲಿ ಕುಖ್ಯಾತ ಕಳ್ಳ ರಾಜನ್, ಕುಟ್ಟಿ ವಿಜಯನ್, ಸಜಿತ್ ವರ್ಗಿಸ್ ಇವರೊಂದಿಗೆ ಬಂದು ಹಾಸನ, ದ.ಕ ಮತ್ತು ಉಡುಪಿ ಭಾಗದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದನು.
ರಾಜನ್ ತನ್ನ 19 ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್ -4 ಹಾಗೂ ಕೇರಳ ರಾಜ್ಯದ ತಿರುಷೂರು-4, ಪಟ್ಟಂಬಿ-4, ತರೂರು-1, ತಮಿಳುನಾಡು ರಾಜ್ಯದ ನೀಲಗಿರಿ-3 ಪ್ರಕರಣಗಳು ದಾಖಲಾಗಿದೆ. ಒಟ್ಟು ಉಡುಪಿ ಜಿಲ್ಲೆ ಸೇರಿ ರಾಜನ್ ಮೇಲೆ 22 ಕೇಸು ದಾಖಲಾಗಿದ್ದು ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟು ಇದೆ ಎಂದು ತಿಳಿದು ಬಂದಿದೆ.
ದಿಲೀಪ್ ಶೆಟ್ಟಿ ವಿರುದ್ದ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್.ಎಂ.ಸಿ ಯಾರ್ಡ್, ನಂದಿನಿ ಲೇಜೌಟ್ ಮತ್ತು ಮಂಡ್ಯದ ನಾಗಮಂಗಲ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿ–ಟ್ಯಾಪ್ ಪ್ರಕರಣ ಹಾಗೂ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಜಾಮೀನು ರಹಿತ ವಾರೆಂಟು ಇದೆ.
ದಿಲೀಪ್ ಶೆಟ್ಟಿ ಹಾಗೂ ರಾಜನ್ ರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಬ್ರಹ್ಮಾವರ ಠಾಣಾ ಸರಹದ್ದಿನ 2 ರಾತ್ರಿ ಮನೆ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ-1 ರಾತ್ರಿ ಮನೆ ಕಳ್ಳತನ ಹಾಗೂ ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 2 ರಾತ್ರಿ ಮನೆ ಕಳ್ಳತನ ಪ್ರಕರಣಗಳಲ್ಲಿ ಸ್ವತ್ತು ಕಳವು, ಚಿನ್ನಾಭರಣ ಕಳವು ಮಾಡಿರುವುದು ತಿಳಿದು ಬಂದಿದೆ. ಕಳ್ಳತನದ ಮಾಲುಗಳನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಅಡವಿಟ್ಟಿರುವುದನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ.
ದಿಲೀಪ್ ಶೆಟ್ಟಿ ಹಾಗೂ ರಾಜನ್ ಕಡೆಯಿಂದ ಸುಮಾರು 13 ಲಕ್ಷ ಬೆಲೆ ಬಾಳುವ ಚಿನ್ನಾಭರಣ , ಬೆಳ್ಳಿ ಆಭರಣ 500 ಗ್ರಾಂ, ಮೌಲ್ಯ ರೂ 20,000/-, ಕೃತ್ಯಕ್ಕೆ ಬಳಸಿದ ಸ್ಯಾಂಟ್ರೋ ಕಾರು ಮೌಲ್ಯ 5 ಲಕ್ಷ, ಒಂದು ಓಮಿನಿ ಕಾರು, ಮೌಲ್ಯ 2 ಲಕ್ಷ ಹಾಗೂ ಸುಮಾರು 20 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, 5 ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷ ವಿಷ್ಣುವರ್ಧನ್ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷರು, ಉಡುಪಿ ಉಪ ವಿಭಾಗ, ಉಡುಪಿರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ, ತನಿಖಾ ಪಿ.ಎಸ್.ಐ ಮುಕ್ತಾಬಾಯಿ, ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಇ, ಬ್ರಹ್ಮಾವರ ಠಾಣಾ ಪ್ರೊಬೆಷನರಿ ಪಿ.ಎಸ್.ಐ. ಸುಬ್ರಮಣ್ಯ ದೇವಾಡಿಗ, ಬ್ರಹ್ಮಾವರ ಠಾಣಾ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮೊಹಮ್ಮದ್ ಅಜ್ಮಲ್, ರಾಘವೇಂದ್ರ ಕಾರ್ಕಡ, ಸಬಿತಾ, ಸುರೇಶ ಬಾಬು, ದಿಲೀಪ್, ಅಣ್ಣಪ್ಪ ಹಾಗೂ ಕೋಟ ಠಾಣಾ ಸಿಬ್ಬಂದಿಯವರಾದ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಪಾಲ್ಗೊಂಡಿದ್ದರು.
