ಹೊಸ ದಿಲ್ಲಿ : ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ಅಬ್ಬರಿಸಲು ಆರಂಭವಾಗಿದೆ. ಇದು ಒಮನ್ ದೇಶದ ದಕ್ಷಿಣ ತೀರ ಹಾಗೂ ಯೆಮನ್ ದೇಶಗಳತ್ತ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ತೀವ್ರತೆ ಪಡೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಅರಬ್ಬಿ ಸಮುದ್ರದ ಕೇಂದ್ರ ಭಾಗದಲ್ಲಿ ಉಂಟಾಗಿರುವ ಈ ಚಂಡಮಾರುತ ಯೆಮನ್ ಹಾಗೂ ಒಮನ್ನ ವಿರುದ್ಧ ದಿಕ್ಕಿನಲ್ಲಿ ಸಾಗಿದರೆ ಭಾರತದತ್ತ ಆಗಮಿಸುವ ಸಾಧ್ಯತೆಯೂ ಇದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪ್ರತಿಕೂಲ ವಾತಾವರಣ ಸೃಷ್ಟಿಗೆ ಕಾರಣವಾಗಲಿದೆ. ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಎರಡನೇ ಚಂಡಮಾರುತ ಇದಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಶನಿವಾರ ಬೆಳಗ್ಗೆ ವೇಳೆಗೆ ತೇಜ್ ಚಂಡಮಾರುತ ಬಿರುಸಾಗುವ ಸಾಧ್ಯತೆ ಇದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಿದೆ. ಸದ್ಯದ ಮಟ್ಟಿಗೆ ಈ ಚಂಡ ಮಾರುತ ಯೆಮನ್ ಹಾಗೂ ಒಮನ್ ಕಡಲ ತೀರಗಳತ್ತ ಸಾಗುತ್ತಿದೆಯಾದರೂ ಯಾವುದೇ ಕ್ಷಣದಲ್ಲೂ ಚಂಡಮಾರುತದ ದಿಕ್ಕು ಬದಲಾಗಬಹುದಾಗಿದೆ.
ಶನಿವಾರ ಸಂಜೆ ಹಾಗೂ ಭಾನುವಾರದ ವೇಳೆಗೆ ಈ ಚಂಡ ಮಾರುತ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ. ಒಮನ್ನ ದಕ್ಷಿಣ ಕಡಲ ತೀರದಿಂದ ಯೆಮನ್ ದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.
ಆದರೆ ಕೆಲವೊಮ್ಮೆ ಚಂಡ ಮಾರುತಗಳು ತಮ್ಮ ದಿಕ್ಕನ್ನು ಬದಲಿಸುವ ಸಾಧ್ಯತೆ ಇದೆ. ಹೀಗಾಗಿ, ಸದ್ಯದ ಅಂದಾಜುಗಳ ಪ್ರಕಾರ, ಭಾರತ ಉಪ ಖಂಡಕ್ಕೆ ಈ ಚಂಡಮಾರುತದ ಭೀತಿ ಇಲ್ಲವಾದರೂ ಚಂಡ ಮಾರುತದ ದಿಕ್ಕು ಮುಂದಿನ ದಿನಗಳಲ್ಲಿ ಯಾವ ಕಡೆಗೆ ಬದಲಾಗಬಹುದು ಅನ್ನೋ ಅಂದಾಜು ಮಾಡುವುದು ಕಷ್ಟಕರವಾಗಿದೆ. ಇನ್ನು, ಚಂಡಮಾರುತ ಸೃಷ್ಟಿಯಾದರೆ ಗಾಳಿಯ ವೇಗವು ಗಂಟೆಗೆ 62ರಿಂದ 88 ಕಿ.ಮೀ. ವೇಗದಲ್ಲಿ ಬೀಸಲಿದೆ. ಒಂದು ವೇಳೆ ತೀವ್ರತೆ ಪಡೆದರೆ ಗರಿಷ್ಠ 89ರಿಂದ 117 ಕಿ.ಮೀ. ವೇಗದಲ್ಲಿ ಬೀಸಲಿದೆ.