ಉಳ್ಳಾಲ : ನೇತ್ರಾವತಿ ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ನಗರದ ಕರ್ತಿಕೆರೆ ಸಮೀಪದ ಬೈರಾಪುರ ಗ್ರಾಮದ ಪ್ರಸನ್ನ ಕುಮಾರ್ (40 ) ಆತ್ಮಹತ್ಯೆ ಮಾಡಿಕೊಂಡವರು. ಬೈರಾಪುರ ಗ್ರಾಮದ ಶಂಕರೇಗೌಡ ಎಂಬುವವರ ಪುತ್ರ ಪ್ರಸನ್ನಕುಮಾರ್ ತರಕಾರಿ, ಕೊತ್ತಂಬರಿ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ದರು.
ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಭಾಗಕ್ಕೆ ಕೊತ್ತಂಬರಿ ಸೊಪ್ಪು ಸರಬರಾಜು ಮಾಡುತ್ತಿದ್ದರು. ಬೆಳಗ್ಗೆ ವ್ಯಾಪಾರದ ಹಣ ಬರಲು ಇದೆ, ವಸೂಲಿ ಮಾಡಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಮಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಸೇತುವೆ ಮೇಲೆ ಕಾರು ನಿಲ್ಲಿಸಿ ಆತ್ಮಹತ್ಯೆ :
ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಉಳ್ಳಾಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸೇತುವೆಯಲ್ಲಿ ಮೇಲೆ ಕಾರು ನಿಲ್ಲಿಸಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾರಿನ ಪೋಟೋ ತೆಗೆದು ಮಾಹಿತಿ ಹಂಚಿಕೊಂಡಿದ್ದು, ನದಿಗೆ ಹಾರಿದ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿದೆ.
ಪ್ರಸನ್ನಕುಮಾರ್ ಉತ್ತಮ ಆರ್ಥಿಕ ಹಿನ್ನಲೆ ಹೊಂದಿದ್ದು, ಇತ್ತೀಚೆಗೆ ಹೊಸ ಮನೆಯನ್ನು ಕಟ್ಟಿಸಿದ್ದರು ಎನ್ನಲಾಗಿದೆ. ಪ್ರಸನ್ನ ಕುಮಾರ್ ವಿವಾಹಿತರಾಗಿದ್ದು, ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಇದ್ದಾರೆ. ಅವರು ನದಿಗೆ ಹಾರಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆ ಅನುಮಾನಾಸ್ಪದವಾಗಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಆತ್ಮಹತ್ಯೆ ತಡೆಬೇಲಿ ಬದಿಯಿಂದ ಹಾರಿ ಆತ್ಮಹತ್ಯೆ :
ಇನ್ನು ಪ್ರಸನ್ನ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡವರು ಕೂಡಲೇ ರಕ್ಷಣೆಗೆ ಓಡಿದರೂ ಅವರು ಅದಾಗಲೇ ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು.

2019 ರಲ್ಲಿ ಕೆಫೆ ಕಾಫಿ ಡೇ ಮಾಲಕ ಸಿದ್ದಾರ್ಥ್ ಆತ್ಮಹತ್ಯೆ ಪ್ರಕರಣದ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. 2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮುಡಾ ಅಭಿವೃದ್ಧಿ ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳಿಗೆ ಬ್ರೇಕ್ ಬಿದ್ದಿತ್ತು.
