ಮಂಗಳೂರು : ನನ್ನ ವಿರುದ್ದದ ಹಲವು ಟೀಕೆ, ಟಿಪ್ಪಣಿಗಳನ್ನು ಕೇಳಿದ್ದೇನೆ. ಹತ್ತಾರು ಬಾರಿ ನನಗೆ ಆದಂತಹ ಅಪಮಾನಗಳನ್ನು ಸಹಿಸಿಕೊಂಡಿದ್ದೇನೆ. ಎಲ್ಲವೂ ಬಿಜೆಪಿ ಪಕ್ಷಕ್ಕಾಗಿ, ಪಕ್ಷದ ಗೆಲುವಿಗಾಗಿ’ ಎಂದು ಬಿಜೆಪಿ ಸಂಸದ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾವುಕ ಮಾತುಗಳನ್ನಾಡಿದ್ದಾರೆ. ಕಟೀಲು ದೇವರ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಯಾರಿಂದಲೂ ಹಣ ಪಡೆದುಕೊಂಡಿಲ್ಲ, ಅಧಿಕಾರಿ, ಕಾಂಟ್ರಾಕ್ಟ್ ದಾರರಿಂದ ಕೂಡ ನಾನು ಹಣ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಬಂಟ್ವಾಳದ ಅಭಿನಂದನಾ ಸಮಾರಂಭವೊಂದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಯಾರೇ ಅಭ್ಯರ್ಥಿಯಾದರೂ ನನ್ನ ಬೆಂಬಲವಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಅಪಮಾನ ಸಹಿಸಿದ್ದೇನೆ :
ಬಿಜೆಪಿಯ ವಿಚಾರಧಾರೆ ಒಪ್ಪಿದ ಕಾರಣ ಎಷ್ಟೇ ಅಪಮಾನವಾದರೂ ಸಹಿಸಿಕೊಂಡಿದ್ದೇನೆ. ನಿಮ್ಮ ಆಶಯಕ್ಕೆ ನಾನು ಕೈ ಮುಗಿಯುತ್ತೇನೆ, ಹಲವು ನೋವುಗಳನ್ನು ಅನುಭವಿಸಿದ್ದೇನೆ ಎಂದರು.
ನನ್ನ ವಿರುದ್ದದ ಹಲವು ಟೀಕೆ, ಟಿಪ್ಪಣಿಗಳನ್ನು ಕೇಳಿದ್ದೇನೆ. ಹತ್ತಾರು ಬಾರಿ ನನಗೆ ಆದಂತಹ ಅಪಮಾನಗಳನ್ನು ಸಹಿಸಿಕೊಂಡಿದ್ದೇನೆ. ಎಲ್ಲವೂ ಬಿಜೆಪಿ ಪಕ್ಷಕ್ಕಾಗಿ, ಪಕ್ಷದ ಗೆಲುವಿಗಾಗಿ ಎಂದು ಹೇಳಿದರು.
ಮುಂದಿನ ಲೋಕಸಭಾ ಸದಸ್ಯ ಸ್ಥಾನದ ಟಿಕೆಟ್ ನನಗೆ ಸಿಗಬೇಕೆಂದಿಲ್ಲ. ಲೋಕಸಭಾ ಅಭ್ಯರ್ಥಿ ಯಾರೇ ಆದರೂ ನನ್ನ ಬೆಂಬಲವಿದೆ. ನನಗೂ ದುಃಖವಿದೇ ಸಂಸದನಾದ ಬಳಿಕ ಹಳ್ಳಿ ಹಳ್ಳಿಗಳಿಗೆ ಬರಲು ಆಗಲಿಲ್ಲ. ರಾಜ್ಯಾಧ್ಯಕ್ಷನ ನೆಲೆಯಲ್ಲಿ ಇಡೀ ರಾಜ್ಯದ ಜವಾಬ್ದಾರಿಯಿತ್ತು. ಪ್ರಾಮಾಣಿಕವಾಗಿ ಬಿಜೆಪಿಯನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಆದರೆ, ನೀವು ತಲೆ ತಗ್ಗಿಸುವ ರೀತಿಯ ಕೆಲಸ ಮಾಡಲಿಲ್ಲ ಎಂದರು.
ಕ್ಷೇತ್ರದತ್ತ ಗಮನ :
ಈಗ ಮತ್ತೆ ನಾನು ದಕ್ಷಿಣ ಕನ್ನಡ ಜಿಲ್ಲೆಯತ್ತ ಗಮನ ನೀಡುತ್ತೇನೆ. ನಿಮ್ಮ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಇನ್ನು ಉಳಿದಿರುವ ಆರು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನಿಮ್ಮ ಗ್ರಾಮಕ್ಕೆ ಬರುತ್ತೇನೆ . ಮತ್ತೆ ನಿಮ್ಮ ಆಶೀರ್ವಾದವನ್ನು ಕಾಲು ಮುಟ್ಟಿ ನಮಸ್ಕಾರ ಮಾಡುವ ಮೂಲಕ ಕೇಳುತ್ತೇನೆ ಎಂದರು.
28 ಸ್ಥಾನ :
ಸಂಘದ ವಿಚಾರಧಾರೆಯಡಿ ಬೆಳೆದ ವಿಜಯೇಂದ್ರ, ಪಕ್ಷದ ಸಂಘಟನೆಯಲ್ಲಿ ನನ್ನ ಜತೆ ತೊಡಗಿಸಿಕೊಂಡವರು. ಸವಾಲಿನ ದಾರಿ ಮೆಟ್ಟಿ ಬಂದವರು. ಅವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆಯ 28 ಸ್ಥಾನ ಗೆಲ್ಲುತ್ತೇವೆ. ಮೋದಿಯವರ ಅಶ್ವಮೇಧ ಕುದುರೆಯನ್ನು ಕಾಂಗ್ರೆಸ್ನವರು ತಾಕತ್ತಿದ್ದರೆ ತಡೆಯಲಿ ಎಂದು ಸವಾಲು ಹಾಕಿದರು.