ಹೈದರಾಬಾದ್: ತೆಲಂಗಾಣದಲ್ಲಿ 2018ರ ಚುನಾವಣೆಯಲ್ಲಿ ಕೇವಲ 1 ಸ್ಥಾನ ಪಡೆದಿದ್ದ ಬಿಜೆಪಿ, ಈ ಬಾರಿ 8 ಕ್ಷೇತ್ರಗಳಿಗೆ ಲಗ್ಗೆ ಇಟ್ಟಿದೆ. ಈ ನಡುವೆ ಈ ಕ್ಷೇತ್ರದ ನಾಯಕನ ಗೆಲುವು ಬಿಜೆಪಿಗೆ ಬಲ ಕೊಟ್ಟಿದೆ. ಹೌದು,ಅದು ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರ ಗೆಲುವು.
ತೆಲಂಗಾಣದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೆನಿಸಿರುವ ಕಾಮಾರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆವಿ ರಮಣ ರೆಡ್ಡಿ ಗೆದ್ದು ಬೀಗಿದ್ದಾರೆ. ಇವರ ಎದುರಾಳಿಗಳಾಗಿದ್ದವರು, ಬೇರೆ ಯಾರು ಅಲ್ಲ, ತೆಲಂಗಾಣದ ಹಾಲಿ ಮುಖ್ಯಮಂತ್ರಿ ಹಾಗೂ ಆಡಳಿತಾರೂಢ ಬಿಆರ್ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್. ಮತ್ತೊಬ್ಬ ಎದುರಾಳಿ, ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ. ಹಾಲಿ ಮತ್ತು ಭಾವಿ ಸಿಎಂ ಇಬ್ಬರನ್ನೂ ಸೋಲಿಸುವುದು ಸಾಮಾನ್ಯದ ಸಂಗತಿಯಲ್ಲ. ಹೀಗಾಗಿ ರಮಣ ರೆಡ್ಡಿ ಅವರ ಸಾಧನೆಯನ್ನು ರಾಷ್ಟ್ರ ನಾಯಕರು ಮೆಚ್ಚಿಕೊಂಡಿದ್ದಾರೆ.
ಅವಿಭಜಿತ ಆಂಧ್ರಪ್ರದೇಶ ರಾಜ್ಯವಿದ್ದಾಗ ಕಾಮಾರೆಡ್ಡಿ ಕ್ಷೇತ್ರವು ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗುತ್ತಿತ್ತು. 2012ರಲ್ಲಿ ಟಿಡಿಪಿಗೆ ರಾಜೀನಾಮೆ ನೀಡಿ ತೆಲಂಗಾಣ ರಾಷ್ಟ್ರ ಸಮಿತಿ (ಈಗಿನ ಬಿಆರ್ಎಸ್) ಪಕ್ಷ ಸೇರಿದ್ದ ಗಂಪಾ ಗೋವರ್ಧನ್ ಅವರು, ಆಗ ಉಪ ಚುನಾವಣೆಯಲ್ಲಿ ಟಿಆರ್ಎಸ್ನಿಂದ ಗೆದ್ದಿದ್ದರು.
ತೆಲಂಗಾಣ ರಾಜ್ಯ ರಚನೆಯಾದ ನಂತರ ನಡೆದ ಮೊದಲ ಎರಡೂ ಚುನಾವಣೆಗಳಲ್ಲಿ ಕಾಮಾರೆಡ್ಡಿಯಿಂದ ಅವರೇ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಕಾಮಾರೆಡ್ಡಿಯಿಂದ ಸ್ಪರ್ಧಿಸುವಂತೆ ಕೆಸಿಆರ್ಗೆ ಸ್ವತಃ ಗಂಪಾ ಗೋವರ್ಧನ್ ಆಹ್ವಾನ ನೀಡಿದ್ದರು. ತಮ್ಮ ಸ್ವಕ್ಷೇತ್ರ ಗಜ್ವೆಲ್ನಲ್ಲಿ ಪೈಪೋಟಿ ಎದುರಾಗುವ ನಿರೀಕ್ಷೆ ಇದ್ದ ಕಾರಣ, ಕೆಸಿಆರ್ ಕಾಮಾರೆಡ್ಡಿಯಲ್ಲಿಯೂ ಸ್ಪರ್ಧಿಸಿದ್ದರು. ಆದರೆ ರಮಣ ರೆಡ್ಡಿ ಅವರನ್ನು ಗೆಲ್ಲು ಬಿಡದೇ, ತಮ್ಮ ವಿಜಯ ಒತಾಕೆ ಹಾರಿಸಿದರು.
ಯಾರು ಈ ರಮಣ ರೆಡ್ಡಿ :
53 ವರ್ಷದ ಕೆವಿ ರಮಣ ರೆಡ್ಡಿ ಅವರು ವೃತ್ತಿಯಿಂದ ಉದ್ಯಮಿ. ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ 12 ನೇ ತರಗತಿ ಉತ್ತೀರ್ಣರಾದ ಬಳಿಕ ಮತ್ತೆ ಕಾಲೇಜು ಮೆಟ್ಟಿಲು ಏರಿಲ್ಲ. ತಮ್ಮ ಬಳಿ 49.7 ಕೋಟಿ ರೂ.ಗೂ ಅಧಿಕ ಮೊತ್ತದ ಸಂಪತ್ತು ಇರುವುದಾಗಿ ಅವರು ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದರು
ಕಾಮಾರೆಡ್ಡಿ ಕೆ ಚಂದ್ರಶೇಖರ್ ರಾವ್ ಅವರಿಗೆ ಹೊಸ ಕ್ಷೇತ್ರವೇನಲ್ಲ. ಕಾಮಾರೆಡ್ಡಿ ಜಿಲ್ಲೆಯ ಬಿಬಿಪೇಟ್ ಮಂಡಲದ ಕೋನಾಪುರ ಗ್ರಾಮ ಕೆ ಚಂದ್ರಶೇಖರ್ ರಾವ್ ಅವರ ಹುಟ್ಟೂರು. ಅವರ ಪೋಷಕರು ಮೇದಕ್ ಜಿಲ್ಲೆಯ ಚಿಂತಮಡಕಕ್ಕೆ ವಲಸೆ ಹೋಗಿದ್ದರು.