ಚಿಕ್ಕಬಳ್ಳಾಪುರ: ಪ್ರೇಮಿಗಳಿಬ್ಬರು ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ಹುಡುಗಿಯ ತಂದೆ, ತಾಯಿ ಹಾಗೂ ಸಂಬಂಧಿಕರು ಹುಡುಗನ ಮನೆಗೆ ನುಗ್ಗಿ, ಆತನ ತಂದೆ ಮತ್ತು ತಾಯಿ ಹಲ್ಲೆ ನಡೆಸಿರುವ ಘಟನೆ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಹುಡುಗನ ಪೋಷಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆ ನಡೆಸಿದ ಹುಡುಗಿಯ ತಂದೆ ಮತ್ತು ಆತನ ಮೂವರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವಕ, ಯುವತಿ ಒಂದೇ ಜಾತಿ, ಒಂದೇ ಸಮುದಾಯದವರಾಗಿದ್ದು, ಅಕ್ಕ-ಪಕ್ಕದ ನಿವಾಸಿಗಳು. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸಿ ಕೆಲವು ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಇವರ ಮದುವೆಗೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಗ್ರಾಮಸ್ಥರು ನ್ಯಾಯ ಪಂಚಾಯತಿ ಮಾಡಿ ಯುವತಿಯನ್ನು ತಂದೆ ತಾಯಿ ಜೊತೆ ಮನೆಗೆ ಕಳುಹಿಸಿ ಕೊಟ್ಟಿದ್ದರು. ಆದರೆ, ಇಬ್ಬರೂ ಸೋಮವಾರ ಮತ್ತೆ ಒಂದುಗೂಡಿ ಮನೆಯಿಂದ ಎಸ್ಕೇಪ್ ಆಗಿದ್ದರು.
ಮರುದಿನ ಯುವತಿಯ ಮನೆಯವರಿಗೆ ವಿಷಯ ತಿಳಿದಿದೆ. ಹೀಗಾಗಿ ಅವರು ಹುಡುಗನ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಹುಡುಗನ ಮನೆಯವರ ಮೇಲೆ ಹುಡುಗಿ ಕಡೆಯವರು ಹಲ್ಲೆ ನಡೆಸಿದ್ದಾರೆ.
ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮ್ಮ ಮೇಲೆ ಐದಕ್ಕೂ ಹೆಚ್ಚು ಮಂದಿ ರಾಡ್ ಮತ್ತು ಮರದ ದಿಮ್ಮಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹುಡುಗನ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 148, 149, 323 ಹಾಗೂ 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.