ವರದಿ : ದಿನೇಶ್ ರಾಯಪ್ಪನಮಠ
ಕೋಟೇಶ್ವರ : ಶ್ರೀ ಪಟ್ಟಾಭಿರಾಮಚಂದ್ರ ದೇವವಸ್ಥಾನ ಬಳಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಎರಡು ಫ್ಯಾನ್ಸಿ ಸ್ಟೋರ್ ಭಸ್ಮವಾಗಿದೆ. ಬಟ್ಟೆಯಂಗಡಿ, ವಾಸದ ಮನೆ ಭಾಗಶಃ ಸುಟ್ಟು ಹೋಗಿದೆ.
ಕೋಟೇಶ್ವರ ಶಿವರಾಮ ಪೂಜಾರಿ ಎಂಬರಿಗೆ ಸೇರಿದ ವಾಣಿಜ್ಯ ಸಂಕೀರ್ಣದ ಕೆಳ ಅಂತಸ್ತಿನಲ್ಲಿ ಬಾಡಿಗೆಗಿದ್ದ ಸುಧಾಕರ ಜೋಗಿ ಎಂಬವರ ಮಹಾಲಕ್ಷ್ಮೀ ಕಂಗನ್ ಎರಡು ಶಾಪ್, ಸುಧಾಕರ ಜೋಗಿ ಅಂಗಡಿ ತಾಗಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಶ್ಯಾಪ್, ಶಿವರಾಮ ಪೂಜಾರಿ ವಾಸದ ಮನೆ ಬೆಂಕಿಯ ಕೆನ್ನಾಲಗೆಯಿಂದ ಸುಟ್ಟಿವೆ.

VIDEO LINK :
ಸುಧಾಕರ ಜೋಗಿ ಸೇರಿದ ಫ್ಯಾನ್ಸಿ ಸೇರಿ ಇತರ ಪರಿಕರಗಳನ್ನು ಇಟ್ಟಿದ್ದು, ಊಟಕ್ಕೆ ಹೋದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಸುಧಾಕರ ಜೋಗಿಗೆ ಮಾಹಿತಿ ನೀಡಿದ್ದಾರೆ. ಅಂಗಡಿ ಮಾಲೀಕರು ಬಂದು ಅಂಗಡಿ ಕೋಣೆ ಬಾಗಿಲು ತೆರೆಯುವಷ್ಟರಲ್ಲಿ ಬೆಂಕಿ ಎಲ್ಲವನ್ನೂ ಧ್ವಂಸ ಮಾಡಿಯಾಗಿತ್ತು.

ಫ್ಯಾನ್ಸಿ ಹಾಗೂ ಪ್ಲಾಸ್ಟಿಕ್ ಐಟಮ್ ಇದ್ದುದ್ದರಿಂದ ಬೆಂಕಿ ಕ್ಷಿಪ್ರಗತಿಯಲ್ಲಿ ಇಡೀ ಅಂಗಡಿ ಕೋಣೆ ಆವರಿಸಿ, ನೋಡು ನೋಡುತ್ತಿದ್ದಂತೆ ಎಲ್ಲವೂ ಭಸ್ಮವಾಗಿದೆ.
ಸುಧಾಕರ ಜೋಗಿ ಅವರ ಅಂಗಡಿಗೆ ಹೊಂದಿಕೊಂಡಿದ್ದ ರಾಜೀವ ಶೆಟ್ಟಿ ಎಂಬವರಿಗೆ ಸೇರಿದ ರೆಡಿಮೇಡ್ ಬಟ್ಟೆ ಹಾಗೂ ಟೈಲರಿಂಗ್ ಅಂಗಡಿಗೂ ಬೆಂಕಿ ವಿಸ್ತರಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ಬಟ್ಟೆ ಬಟ್ಟೆ ಹೊಲಿಯವ ಯಂತ್ರ ಎಲ್ಲವೂ ಸುಟ್ಟು ಕರಕಲಾಗಿದೆ. ಅಂಗಡಿ ಮೇಲ್ಬಾಗದಲ್ಲಿರುವ ಶಿವರಾಮ ಪೂಜಾರಿ ವಾಸದ ಮನೆ ನೆಲ ಹಾಸು, ಶೆಟರ್, ಕಿಟಕಿ ಸುಟ್ಟು ಹೋಗಿದೆ.
ಪ್ಯಾನ್ಸಿ ಸ್ಟೋರ್ನಲ್ಲಿದ್ದ ೩ ಲಕ್ಷ ನಗದು ಹಾಗೂ ಸುಟ್ಟ ಪರಿಕರದ ಮೌಲ್ಯ ೬೦ ಲಕ್ಷ ರೂ ಆಗಿದ್ದು, ಬಟ್ಟೆಯಂಗಡಿ ಮಾಲೀಕರಿಗೆ ೩ ಲಕ್ಷ ಹಾಗೂ ವಾಸದ ಮನೆಗೆ ೮ ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಮಧ್ಯಾಹ್ನ ೨.೩೦ಕ್ಕೆ ಸುಮಾರಿಗೆ ಬೆಂಕಿ ಕಾಣಿಸಿದ್ದು, ಪರಿಸರದ ನಾಗರಿಕರು ಅಗ್ನಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಇಲ್ಲಿನ ನಿವಾಸಿಗಳ ಹರಸಾಹಸದಿಂದ ಸಂಜೆ ಆರುಗಂಟೆ ಸಮಾರಿಗೆ ಅಗ್ನಿ ಹಿಡಿತಕ್ಕೆ ತರಲಾಯಿತು.

ವಿದ್ಯುತ್ ಶಾರ್ಟ್ ಸಕ್ಯೂಟ್ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ.
