ಶಿವಮೊಗ್ಗ: ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಸಿದ್ದ ಪ್ರಕರಣದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟುವಿನ ಮಜಿನ್ ಅಬ್ದುಲ್ ರೆಹಮಾನ್ ಹಾಗೂ ದಾವಣಗೆರೆ ಜಿಲ್ಲೆ ದೇವನಾಯಕನಹಳ್ಳಿಯ ನದೀಂ ಅಹಮದ್ ಬಂಧಿತ ಆರೋಪಿಗಳು.
ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಚಟುವಟಿಕೆಗಳನ್ನ ಹೆಚ್ಚಿಸಲು ಮಜಿನ್ ಅಬ್ಧುಲ್ ರೆಮಾನ್ ಹಾಗೂ ನದೀಂ ಅಹಮದ್ ಅವರನ್ನು ಪ್ರಮುಖ ಆರೋಪಿಗಳಾದ ಮಾಜ್ ಮುನೀರ್ ಹಾಗೂ ಸೈಯದ್ ಯಾಸೀನ್ ನೇಮಕಗೊಳಿಸಿದ್ದರು. ಸಂಚನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ವಿಸ್ತರಿಸುವ ಭಾಗವಾಗಿ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕ ಸ್ಪೋಟ ನಡೆಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.
ತುಂಗಾ ತೀರದಲ್ಲಿ ಬಾಂಬ್ ಸ್ಫೋಟಿಸಿದ ಆರೋಪದಡಿ 19 ಸೆಪ್ಟೆಂಬರ್ 2022ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ.4 ರಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಎನ್ಐಎ ತನಿಖೆ ಆರಂಭಿಸಿತ್ತು. ಈಗಾಗಲೇ ನಾಲ್ವರು ಆರೋಪಗಳನ್ನು ಬಂಧಿಸಿದೆ.


