ನವದೆಹಲಿ :ಬಜೆಟ್ ಅಧಿವೇಶನ ಶುರುವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಜನರ ಎಲ್ಲ ಆಶಯಗಳನ್ನು ಪೂರೈಸಲು ಪ್ರಯತ್ನಿಸಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅವರು ಬಜೆಟ್ ಅಧಿವೇಶನ ಆರಂಭಕ್ಕೂ ಮೊದಲು ಸಂಸತ್ ಕಟ್ಟಡದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಅರ್ಥಪೂರ್ಣ ಅಧಿವೇಶನಕ್ಕೆ ಅವಕಾಶ ನೀಡಿ, ಈ ಬಾರಿ ಜನರ ಅಪೇಕ್ಷೆಯ ಬಜೆಟ್ ಮಂಡನೆ ಆಗಲಿದೆ. ಎಲ್ಲಾ ಸಂಸದರೂ ಜನಪರ ವಿಚಾರಕ್ಕೆ ಆದ್ಯತೆ ನೀಡಲಿ, ಸುಗಮ ಕಲಾಪಕ್ಕೆ ಎಲ್ಲ ಪಕ್ಷಗಳ ಸಹಕಾರ ಕೋರುತ್ತೇನೆ ಎಂದು ಹೇಳಿದ್ದಾರೆ.

ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆಯೂ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ. ಜಗತ್ತಿನಲ್ಲಿ ಭಾರತದ ಆರ್ಥಿಕತೆ ಬೆಳಗಲಿದೆ ಎಂಬ ಆಶಾಭಾವವಿದೆ. ಇದಕ್ಕೆ ನಿರ್ಮಲಾ ಸೀತಾರಾಮನ್ ನೀರೆರೆಯಲಿದ್ದಾರೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.
ಬಜೆಟ್ ಅಧಿವೇಶನಕ್ಕೂ ಮೊದಲು ವಿಶ್ವದ ಹಲವು ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಹೊಗಳಿವೆ. ಇದು ಸಕಾರಾತ್ಮಕ ಸಂದೇಶ, ಭರವಸೆಯ ಕಿರಣ ಮತ್ತು ಉತ್ಸಾಹಹವನ್ನು ಹೆಚ್ಚಿಸಿದೆ. ಪ್ರಮುಖವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಮಾಡುವ ಮೊದಲ ಭಾಷಣವು ನಮ್ಮ ಸಂವಿಧಾನ ಮತ್ತು ವಿಶೇಷವಾಗಿ ಮಹಿಳೆಯರ ಗೌರವಕ್ಕೆ ಹೆಮ್ಮೆಯ ವಿಷಯವಾಗಿದೆ. ಇಡೀ ಜಗತ್ತು ಭಾರತದತ್ತ ದೃಷ್ಟಿ ನೆಟ್ಟಿದೆ. ಭಾರತ ಮೊದಲು, ಪ್ರಜೆ ಮೊದಲು ಎಂಬ ಚಿಂತನೆಯನ್ನು ತೆಗೆದುಕೊಂಡು ನಾವು ಸಂಸತ್ತಿನ ಈ ಬಜೆಟ್ ಅಧಿವೇಶನವನ್ನು ಶುರು ಮಾಡಲಿದ್ದೇವೆ. ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವುದರ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ”

