ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರದ ಹಡಿಲು ಗದ್ದೆಗಳಲ್ಲಿ ಕೃಷಿಯನ್ನು ಮಾಡುವ ಉದ್ದೇಶವನ್ನು ಹೊಂದಿದ ಕೇದಾರೋತ್ಥಾನ ಟ್ರಸ್ಟ್(ರಿ.) ಇಂದು ಉಡುಪಿಯ ಅಮೃತ ಗಾರ್ಡನ್ ನಲ್ಲಿ ಉದ್ಘಾಟನೆಗೊಂಡಿತು. ಟ್ರಸ್ಟಿನ ಅಧ್ಯಕ್ಷರಾದ ಕೆ. ರಘುಪತಿ ಭಟ್ ಮಾತನಾಡಿ, ಈ ವರ್ಷ ಕನಿಷ್ಠ 2 ಸಾವಿರ ಎಕರೆ ಹಡಿಲು ಗದ್ದೆಯಲ್ಲಿ ಭತ್ತದ ಸಾವಯವ ಬೇಸಾಯ ಮಾಡಬೇಕು ಎಂಬ ಸಂಕಲ್ಪ ತಿಳಿಸಿದರು.
ಟ್ರಸ್ಟ್ ನಲ್ಲಿ ಉಡುಪಿ ನಗರಸಭೆಯ 35 ನಗರ ಸಭಾ ಸದಸ್ಯರು, 19 ಪಂಚಾಯತ್ ಅಧ್ಯಕ್ಷರುಗಳು ಹಾಗೂ 8ಮಂದಿ ಸಾಮಾಜಿಕ ಕಾರ್ಯಕರ್ತರು ಸದಸ್ಯರಾಗಿರುತ್ತಾರೆ. ಮುಂದೆ ಆಸಕ್ತ ಸಾಮಾಜಿಕ ಕಾರ್ಯಕರ್ತರನ್ನು ಸದಸ್ಯರಾಗಿ ನೊಂದಾಯಿಸಿಕೊಳ್ಳುವ ಅವಕಾಶವಿದೆ ಎಂದರು.
ಟ್ರಸ್ಟಿನ ಕಾರ್ಯದರ್ಶಿಯಾಗಿ ಮುರಳಿ ಕಡೆಕಾರ್, ಕೋಶಾಧಿಕಾರಿಯಾಗಿ ರಾಘವೇಂದ್ರ ಕಿಣಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರದೀಪ್ ಜೋಗಿಯವರನ್ನು ಲೆಕ್ಕಪರಿಶೋಧಕರಾಗಿ ನೇಮಕ ಮಾಡಲಾಯಿತು.ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ಹಾಗೂ ಕೃಷಿ ಅಧಿಕಾರಿಗಳಾದ ಕೆಂಪೇಗೌಡ ಅವರು ಮಾರ್ಗದರ್ಶನ ನೀಡಿದರು. ಟ್ರಸ್ಟ್ಗೆ ಆರಂಭಿಕ ದೇಣಿಗೆಯಾಗಿ ಶ್ರೀ ರಾಘವೇಂದ್ರ ಕಿಣಿ ಅವರು 1,11,111ರೂಪಾಯಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ನ ಲಾಂಛನವನ್ನು ಅನಾವರಣಗೊಳಿಸಲಾಯಿತು.