ವರದಿ: ಶಫೀ ಉಚ್ಚಿಲ
ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ವಿಭಿನ್ನ ರೀತಿಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ತಿಳಿಸಿದ್ದಾರೆ.
ಎಲ್ಲೂರಿನಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕ ಲೋಕಾರ್ಪಣೆಗೊಳ್ಳಲು ಸಿದ್ಧಗೊಳ್ಳುತ್ತಿದ್ದು ಈ ನಡುವೆ ಸರಕಾರದ ನಿರ್ದೇಶನಗಳಂತೆ ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ದಹನ ಮೌಲ್ಯವುಳ್ಳ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ಕಳುಹಿಸುವ ಮೂಲಕ ಕಾಪು ಪುರಸಭೆಯಿಂದ ಸರ್ಕಾರದ ಆದೇಶಗಳನ್ನು ಪಾಲಿಸುವುದಲ್ಲದೇ ಅನಾವಶ್ಯಕವಾದ ತ್ಯಾಜ್ಯ ನೆಲಭರ್ತಿಯನ್ನು ತಪ್ಪಿಸುವ ಮೂಲಕ ಪರಿಸರ ಸ್ನೇಹಿ ಹೆಜ್ಜೆ ಇಡಲಾಗುತ್ತಿದೆ.
ಈಗಾಗಲೇ ಸಂಗ್ರಹವಾಗುವ ತ್ಯಾಜ್ಯದ ಪೈಕಿ ಮಾರುಕಟ್ಟೆ ಮೌಲ್ಯ ಹೊಂದಿದ್ದು ಮರುಬಳಕೆಗೆ ಯೋಗ್ಯವಿರುವ ಪ್ಲಾಸ್ಟಿಕನ್ನು ನೇರ ತ್ಯಾಜ್ಯ ಸಂಸ್ಕರಣೆಗೆ ನೀಡುವ ಮೂಲಕ ಪುರಸಭೆ ಆದಾಯ ಗಳಿಸುತ್ತಿದ್ದು, ಉಳಿದಂತೆ ಮರುಬಳಕೆ ಮೌಲ್ಯ ಹೊಂದಿರದ ತೆಳುವಾದ ಪ್ಲಾಸ್ಟಿಕ್ ಇತ್ಯಾದಿ ಪ್ಲಾಸ್ಟಿಕ್ಗಳನ್ನು ಸಂಸ್ಕರಿಸಿ ರಸ್ತೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಈ ವರ್ಷದಲ್ಲಿ ಈಗಾಗಲೇ ಸುಮಾರು 20 ಟನ್ನುಗಳಷ್ಟು ಪ್ಲಾಸ್ಟಿಕನ್ನು ಈ ಕೆಲಸಕ್ಕೆ ಬಳಸಲಾಗಿದೆ. ಪುರಸಭೆಗೆ ಯಾವುದೇ ಖರ್ಚಿಲ್ಲದೇ ಸಂಪೂರ್ಣ ಖಾಸಗಿ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಎಂಬಂತೆ ಯೋಜನೆ ಕಾರ್ಯಗತ ಗೊಂಡಿದೆ.
ಆದರೆ ಮರುಬಳಕೆ ಮೌಲ್ಯ ಹೊಂದಿರದ ಮತ್ತು ರಸ್ತೆ ನಿರ್ಮಾಣಕ್ಕೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಿಲೇವಾರಿ ಪುರಸಭೆಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಸರಕಾರದ ನಿರ್ದೇಶನಗಳಂತೆ ಸದರಿ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ಉರುವಲಾಗಿ ಬಳಸಲು ಕಳುಹಿಸಬಹುದಾಗಿದ್ದರೂ ಕರಾವಳಿ ಪ್ರದೇಶದಲ್ಲಿ ಸಿಮೆಂಟ್ ಕಾರ್ಖಾನೆಗಳು ಇರದ ಕಾರಣ ಬಹುದೂರದ ಗುಲಬರ್ಗಾ, ಬಾಗಲಕೋಟೆ ಸಿಮೆಂಟ್ ಕಾರ್ಖಾನೆಗಳಿಗೆ ಕಳುಹಿಸುವುದು ಪುರಸಭೆಗೆ ಆರ್ಥಿಕವಾಗಿ ಹೊರೆಯಾಗಿತ್ತು. ಇದನ್ನು ಮನಗಂಡ ಮಾನ್ಯ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ಹಾಗೂ ಪುರಸಭೆ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ರವರ ಸತತ ಪ್ರಯತ್ನದಿಂದ ಬೆಂಗಳೂರು ಮೂಲದ
ರೀಕರ್ಟ್ ಎಂಬ ತ್ಯಾಜ್ಯ ವಿಲೇವಾರಿ ಸಂಸ್ಥೆ ಪ್ರಾಯೋಜಕತ್ವದಲ್ಲಿ ಪುರಸಭೆಗೆ ಯಾವುದೇ ಖರ್ಚಿಲ್ಲದೇ ತ್ಯಾಜ್ಯಗಳನ್ನು ಸಿಮೆಂಟ್ ಕಾರ್ಖಾನೆಗೆ ಉರುವಲಾಗಿ ಕಳುಹಿಸುವ ವ್ಯವಸ್ಥೆ ಕಲ್ಪಿಸಿಕೊಂಡಿದೆ. ಈಗಾಗಲೇ ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ಉತ್ತಮ ಗುಣಮಟ್ಟದ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗೆ ದೊಡ್ಡ ಲಾರಿಗಳ ಮುಖಾಂತರ ಕಳುಹಿಸಲಾಗುತ್ತಿದೆ. ಆದರೂ ಸಹ ಕಳೆದ 4-5 ವರ್ಷಗಳಿಂದ ಸಂಗ್ರಹವಾಗಿರುವ ತ್ಯಾಜ್ಯ ಬೃಹತ್ ಪ್ರಮಾಣದಲ್ಲಿದ್ದು ಉಳಿಕೆ ತ್ಯಾಜ್ಯವನ್ನು ಸದ್ಯದಲ್ಲಿಯೇ ಎಲ್ಲೂರು ಘನತ್ಯಾಜ್ಯ ಘಟಕಕ್ಕೆ ಸ್ಥಳಾಂತರಿಸಿ ಆಧುನಿಕ ಮೆಷಿನರಿಗಳ ನೆರವಿನಿಂದ ಎಲ್ಲೂರಿನಲ್ಲಿ ತ್ಯಾಜ್ಯ ಸಂಸ್ಕರಿಸುವ ಗುರಿ ಪುರಸಭೆ ಹೊಂದಿದೆ ಎಂದು ವೆಂಕಟೇಶ ನಾವಡ ತಿಳಿಸಿದ್ದಾರೆ.