ವರದಿ : ದಿನೇಶ್ ರಾಯಪ್ಪನಮಠ
2021-22ನೇ ಆರ್ಥಿಕ ವರ್ಷದಲ್ಲಿಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ 169ಂ ಯ ಹೆಬ್ರಿ-ಪರ್ಕಳ ರಸ್ತೆ, ಕರಾವಳಿ ಜಂಕ್ಷನ್-ಮಲ್ಪೆ ಸಂಪರ್ಕಿಸುವ ರಸ್ತೆಗಳನ್ನು ಚತುಷ್ಪಥೀಕರಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ಹಾಗೂ ಒಟ್ಟು 29.1 ಕಿ ಮೀ ಉದ್ದದ ಕಾಮಗರಿಗಳಿಗೆ ಭೂ ಸಾರಿಗೆ ಸಚಿವಾಲಯ ಅಂದಾಜು ಮೊತ್ತ 350.00 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169A ಸೀತಾನದಿ ಬಳಿಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು, ತಡೆಗೋಡೆ ನಿರ್ಮಾಣ, ರಸ್ತೆ ಎತ್ತರಿಸುವುದು ಮತ್ತು ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರು ಬಳಿ ರಸ್ತೆ ಎತ್ತರಿಸಿ ತಡೆಗೋಡೆಯನ್ನು ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಅಂದಾಜು ಮೊತ್ತ 19.00 ಕೋಟಿ ರೂಪಾಯಿಗಳ ಅನುಮೋದನೆಯನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯ ನೀಡಿದೆ ಎಂದು ತಿಳಿಸಿದ್ದಾರೆ.
ದೇಶ ಕೋವಿಡ್ ಸೋಂಕಿನ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲೂ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ರೂಪಾಯಿ 369.00 ಕೋಟಿಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಹಾಗೂ ವಿಶೇಷವಾಗಿ ಕೇಂದ್ರ ಭೂ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ ಸಂಸದೆ ಶೋಭಾ ಕರಂದ್ಲಾಜೆ ಕೃತಜ್ಞತೆ ತಿಳಿಸಿದ್ದಾರೆ.