ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಾಮಾಜಿಕ ಭದ್ರತಾ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಬ್ಯಾಂಕ್ ಅಧಿಕಾರಿಗಳ ಸಮನ್ವಯದಲ್ಲಿ ಪ್ರಧಾನ ಮಂತ್ರಿ ಜೀವನ್ ಭಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ‘ವಿಮಾ ಸೌಲಭ್ಯ’ ಸಪ್ತಾಹ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಮತ್ತು ಹಾರಾಡಿ ಗ್ರಾಮ ಪಂಚಾಯತಿಯಲ್ಲಿ ಗುರುವಾರ ಮತ್ತು ಶುಕ್ರವಾರ ಜರುಗಿತು.
ಬಾರಕೂರು ಕೆನರಾ ಬ್ಯಾಂಕಿನ ಮ್ಯಾನೇಜರ್ ಜಯಂತ್ ಬಿ. ಮಾತನಾಡಿ, ಈ ಯೋಜನೆ ಪ್ರತಿ ಮನೆಯವರಿಗೆ ತಲುಪಬೇಕು. ಆಕಸ್ಮಿಕ ಸಾವು, ಅಫಘಾತದ ಸಾವು ಮತ್ತು ಸಹಜ ಸಾವಿಗೆ ಉತ್ತಮ ಯೋಜನೆಯಾಗಿದೆ. ವರ್ಷಕ್ಕೆ ಕೇವಲ 12 ರೂ ಮತ್ತು 330 ರೂಪಾಯಿಯನ್ನು ಖಾತೆದಾರು ಪಾವತಿಸಿದಲ್ಲಿ ಒಂದು ವರ್ಷ ಅದರ ಪ್ರಯೋಜನ ಸಿಗಲಿದೆ. ಪ್ರತಿ ವರ್ಷ ಇದನ್ನು ಕಟ್ಟಬೇಕು ಅಥವಾ ಖಾತೆಯಲ್ಲಿ ಹಣ ಇದ್ದರೆ ಬ್ಯಾಂಕ್ ಈ ಯೋಜನೆಗೆ ನೀಡುತ್ತದೆ. ಕೋರೋನದಂತ ರೋಗದ ಸಾವಿಗೆ ಕೂಡಾ ರೂ 2 ಲಕ್ಷ ಕುಟುಂಬಿಕರಿಗೆ ಇದು ಸಿಗಲಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯಿರಿ ಎಂದರು
ಈ ಸಂದರ್ಭ ಹನೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಕಾರ್ಯದರ್ಶಿ ಉಮೇಶ ಕಲ್ಯಾಣಪುರ, ಹಾರಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಆದರ್ಶ ಶೆಟ್ಟಿ, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾನಾ ಸ್ವಸಹಾಯ ಸಂಘ ಮತ್ತು ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.