ಕಾಪು : ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಬಗ್ಗೆ ಖಾಸಗಿ ವಾಹಿನಿಯಲ್ಲಿ ನಿಂದಿಸಿ ಅವಮಾನಿಸಿರುವುದನ್ನು ವಿರೋಧಿಸಿ ಕಾಪು ಬಂಟರ ಸಂಘ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖಾಸಗಿ ವಾಹಿನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯನ್ನು ನೀಡಲಾಯಿತು.
ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರಾದ ರಕ್ಷಿತ್ ಶೆಟ್ಟಿ ಬಂಟ ಸಮುದಾಯಕ್ಕೆ ಸೇರಿದ ಲಕ್ಷಾಂತರ ಕನ್ನಡಿಗರ ಮತ್ತು ಕರಾವಳಿಯ ಜನಮನಗೆದ್ದ ಪ್ರತಿಭಾನ್ವಿತ ನಟನಾಗಿದ್ದು ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಹೀನಾಯವಾಗಿ ನಿಂದಿಸಲಾಗಿದೆ ಇದರಿಂದ ಬಂಟ ಸಮಾಜಕ್ಕೆ ತುಂಬಾ ನೋವನ್ನು ತಂದಿದೆ ಮತ್ತು ಇದು ಬಂಟ ಸಮಾಜಕ್ಕೆ ಮಾಡಿದ ಅವಮಾನ ಎಂದು ಬಂಟರ ಸಂಘದ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಸ್ವಾತಂತ್ರ್ಯವಿದೆ ಎಂದು ಸ್ವ-ಇಚ್ಛೆಯಿಂದ ಬೇಕಾಬಿಟ್ಟಿ ತೇಜೋವಧೆ ಮಾಡುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕಿದೆ. ಖಾಸಗಿ ವಾಹಿನಿಯ ಸಂಬಂಧಪಟ್ಟವರು ಕ್ಷಮೆಯಾಚಿಸಬೇಕು ಮತ್ತು ಕಾರ್ಯಕ್ರಮ ಪ್ರಸಾರ ಮಾಡಲು ಬೆಂಬಲಿಸಿದ ಕಾರ್ಯಕ್ರಮ ನಿರೂಪಕರ ಮೇಲೆ ಕ್ರಮ ಕೈಗೊಳ್ಳಬೇಕು. ಕರಾವಳಿಯ ಯುವಕರು ನಟರಾಗಿ ಮಿಂಚುತ್ತಿರುವುದು ಸಹಿಸಲಾಗದೆ ಇಂತಹ ಕಾರ್ಯಕ್ರಮಗಳನ್ನು ಮಾಡಿ ತೇಜೋವಧೆ ಮಾಡಲಾಗುತ್ತಿದೆ ಎಂದು ಬಂಟರ ಮುಖಂಡರಾದ
ಕಾಪು ಲೀಲಧರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಕಾಪು ಬಂಟರ ಸಂಘದ ಅಧ್ಯಕ್ಷರಾದ ಕೆ ವಾಸುದೇವ ಶೆಟ್ಟಿ, ಕಾಪು ಬಂಟರ ಸಂಘದ ಮುಖಂಡರಾದ ರವಿರಾಜ ಶೆಟ್ಟಿ, ರತ್ನಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಕಾಪು ಲೀಲಾಧರ್ ಶೆಟ್ಟಿ , ರತ್ನಾಕರ ಹೆಗಡೆ, ಜಯಲಕ್ಷ್ಮಿ ಎಸ್ ಶೆಟ್ಟಿ, ನಿರ್ಮಲ್ ಕುಮಾರ್ ಹೆಗಡೆ, ದಿವಾಕರ ಬಿ ಶೆಟ್ಟಿ, ಯೋಗೀಶ್ ಶೆಟ್ಟಿ, ಪ್ರಭಾತ್ ಶೆಟ್ಟಿ, ರಾಜೇಶ್ ಶೆಟ್ಟಿ, ದಯಾನಂದ ಶೆಟ್ಟಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.