ಕಾಪು: ಪ್ರತೀ ದಿನ ಬೆಳಗ್ಗೆ ಎದ್ದು ಮನೆ ಮುಂದೆ ರಂಗೋಲಿ ಹಾಕುವವರನ್ನು ನಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ . ಆದರೆ ಇಲ್ಲೊಬ್ಬ ಯುವಕ ರಂಗೋಲಿಯಿಂದ ದೇವರ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರೇ ಅಲಿ ಮಲ್ಲಾರ್.
ಕಾಪು ತಾಲ್ಲೂಕಿನ ಮಲ್ಲಾರು ರಾಣ್ಯಕೇರಿ ನಿವಾಸಿ ಅಬ್ದುಲ್ ಕರೀಂ ಅವರ ಪುತ್ರ ಬಿಕಾಂ ಪದವಿ ಮುಗಿಸಿ ಗಾರ್ಡನ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಚಿತ್ರ ಕಲೆಯ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇವರು ಈಗಾಗಲೇ ಕಟಿಲೇಶ್ವರಿ, ಎಲ್ಲಮ್ಮ, ಕೊಲ್ಲೂರು ಶ್ರೀ ಮೂಕಾಂಬಿಕೆ, ಅಯ್ಯಪ್ಪ ಸ್ವಾಮಿ, ಗಣಪತಿ ಹೀಗೆ ಹಲವಾರು ದೇವರುಗಳ ಚಿತ್ರಗಳನ್ನು ರಂಗೋಲಿ ಹಾಗು ತ್ರೆಡ್ ಆರ್ಟ್ ಮೂಲಕ ಬಿಡಿಸಿದ್ದಾರೆ.
ಯಾವುದೇ ಚಿತ್ರ ಬಿಡಿಸಲು ಅದಕ್ಕೆ ತಕ್ಕ ಮನಸ್ಥಿತಿ ಅಗತ್ಯವಿದೆ. ಕೈಯಲ್ಲಿ ಬಣ್ಣವನ್ನು ಹಿಡಿದು ತನ್ನ ಯೋಚನೆಯ ಆಕಾರಗಳು ಬಿಡಿಸುವುದು ಒಂದು ಸವಾಲಾಗಿದೆ. ಇದಕ್ಕೆ ನಿರಂತರ ಅಭ್ಯಾಸ, ತಲ್ಲೀನತೆ, ತಾಳ್ಮೆಯ ಗುಣ ಅತ್ಯಗತ್ಯ. ‘ಸತತ ಎರಡು ವರ್ಷಗಳ ಪ್ರಯತ್ನದ ಫಲವಾಗಿ ರಂಗೋಲಿ ಮೂಲಕ ಚಿತ್ರ ಬಿಡಿಸಲು ಸಾಧ್ಯವಾಗಿದೆ’ ಎಂಬುದು ಅಲಿ ಮಲ್ಲಾರ್ ಅಂಬೋಣ. ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ಸಭಾ ಭವನದಲ್ಲಿ ಇವರ ರಂಗೋಲಿ ಕಲೆಯನ್ನು ವೀಕ್ಷಿಸಿದ ಜನರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.