ಉಡುಪಿ : ಯಕ್ಷಗಾನ ಕಲಾರಂಗ ಕುಂದಾಪುರದ ವಿದ್ಯಾಪೋಷಕ್ ವಿದ್ಯಾರ್ಥಿನಿ ಶ್ರೀನಿಧಿ ಇವಳಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಪಾವನಿ’ ಮನೆಯ ಉದ್ಘಾಟನಾ ಸಮಾರಂಭ ಶನಿವಾರ ನೆರವೇರಿತು. ಮನೆಯ ಪ್ರಾಯೋಜಕತ್ವ ವಹಿಸಿದ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಸರಸ್ವತಿ ಜಿ. ರಾವ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತಾಡಿದ ಎಂ. ಗಂಗಾಧರ್ ರಾವ್, ಎಚ್.ಎಸ್ ಶೆಟ್ಟಿಯವರು ಕಲಾರಂಗದ ಕಾರ್ಯವೈಖರಿಯನ್ನು ಮೆಚ್ಚಿ ತಾನು ಮುಂದಿನ ದಿನಗಳಲ್ಲಿ 5 ಮನೆಗಳ ಪ್ರಾಯೋಜಕತ್ವವಹಿಸುವ ಭರವಸೆ ನೀಡಿದರು. ಇದೇ ರೀತಿ ಜೆ.ಎನ್. ಭಟ್ ಹಾಗೂ ಡಾ. ರಾಜಾ ವಿಜಯ್ ಕುಮಾರ್ ತಲಾ ಒಂದೊಂದು ಮನೆಯ ಪ್ರಾಯೋಜಕತ್ವದ ಆಶ್ವಾಸನೆ ನೀಡಿದರು.
ಫಲಾನುಭವಿ ವಿದ್ಯಾರ್ಥಿ ಶ್ರೀನಿಧಿ ಮಾತನಾಡಿ, ಕಷ್ಟದ ಸಂದರ್ಭದಲ್ಲಿ ನನಗೆ ಮನೆ ನಿರ್ಮಿಸಿಕೊಟ್ಟು ನೆರವಾದ ವಿದ್ಯಾಪೋಷಕ್ ಸಂಸ್ಥೆಗೆ ಹಾಗೂ ನನ್ನ ದಾನಿಗಳಿಗೆ ಚಿರಋಣಿಯಾಗಿದ್ದೇನೆ. ಮುಂದೆ ಉದ್ಯೋಗ ದೊರೆತ ಬಳಿಕ ನನ್ನಂತೆ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗುತ್ತೇನೆ ಎಂದರು.
ಮೈಸೂರು ಮರ್ಕಂಟೈಲ್ ಕಂ. ಲಿ. ನ ಆಡಳಿತ ನಿರ್ದೇಶಕ ಎಚ್. ಎಸ್. ಶೆಟ್ಟಿ, ಮಂಗಳೂರಿನ ಉದ್ಯಮಿ ಗೋಕುಲನಾಥ ಪ್ರಭು, ಬೆಂಗಳೂರಿನ ವೈದ್ಯ ವಿಜ್ಞಾನಿ ಡಾ. ರಾಜಾ ವಿಜಯ್ ಕುಮಾರ್, ಮಂಗಳೂರಿನ ವೈದ್ಯ ಡಾ. ಜೆ.ಎನ್ ಭಟ್, ಗೋವಾದ ಆನಂದ ಸಾಗರ್ ಗ್ರೂಪ್ನ ಮಾಲಕ ರಾಘವ ಎಂ. ಶೆಟ್ಟಿ ಹಾಗೂ ಉದ್ಯಮಿ ಯು. ವಿಶ್ವನಾಥ ಶೆಣೈ, ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಸ್.ವಿ ಭಟ್, ವಿ.ಜಿ ಶೆಟ್ಟಿ, ಕೆ. ಮನೋಹರ್, ಪ್ರೊ. ಸದಾಶಿವ ರಾವ್, ಎಚ್.ಎನ್ ಶೃಂಗೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಇದು ಸಂಸ್ಥೆ ನಿರ್ಮಿಸಿ ಹಸ್ತಾಂತರಿಸುತ್ತಿರುವ 20ನೇ ಮನೆಯಾಗಿದೆ.