ಉಡುಪಿ : ದುಬೈಯಲ್ಲಿ ಟೆಕ್ನಿಕಲ್ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿಟ್ಟೂರು ಪ್ರೌಢ ಶಾಲೆಯ ಹಳೆವಿದ್ಯಾರ್ಥಿ ಶ್ರೀ ರಾಜೇಶ್ ಕುಮಾರ್ ಕೊರೋನಾದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೀಡಲು 50,000/- ರೂಪಾಯಿಗಳನ್ನು ಕಳುಹಿಸಿದ್ದು ಅದನ್ನು 10 ಮಂದಿಗೆ ತಲಾ 5 ಸಾವಿರ ರೂಪಾಯಿಯಂತೆ ಇಂದು (25-07-2021) ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್, ರಾಜೇಶ್ ರಂತೆ ಆರ್ಥಿಕವಾಗಿ ಸಬಲರಾದ ಮೇಲೆ ಸಣ್ಣ ರೀತಿಯಲ್ಲಿ ತನ್ನ ಸುತ್ತಲಿನ ಸಮಾಜದ ನೊಂದವರಿಗೆ ನೆರವು ನೀಡಿದಲ್ಲಿ ಸ್ವಸ್ಥಸಮಾಜ ನಿರ್ಮಾಣಗೊಳಿಸುವಲ್ಲಿ ಸಹಾಯವಾದೀತು.
ರಾಜೇಶ್ ಹೀಗೆಯೇ ಬೆಂಗಳೂರಿನ 50 ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾಗುವ ಸಾಮಾಗ್ರಿ ನೀಡಿ ನೆರವಾಗಿದ್ದಾರೆ. ಇಂತಹ ವಿದ್ಯಾರ್ಥಿಗಳ ಈ ರೀತಿಯ ಸದ್ಗುಣಗಳೇ ಶಿಕ್ಷಕರಾದವರಿಗೆ ಸಾರ್ಥಕಭಾವವನ್ನುಂಟು ಮಾಡುವುದು ಎಂದು ನುಡಿದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವಿ. ಭಟ್, ಹಳೆವಿದ್ಯಾರ್ಥಿ ಪಿ. ಕೃಷ್ಣಮೂರ್ತಿ ಭಟ್, ಶಿಕ್ಷಕ ಎಚ್.ಎನ್ ಶೃಂಗೇಶ್ವರ ಉಪಸ್ಥಿತರಿದ್ದರು.