ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ಹಣ್ಣು ಕಾಯಿ ತೀರ್ಥ ಪ್ರಸಾದ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ದೇವಾಲಯಗಳ ನಗರ ಬಾರಕೂರಿನ ಪುರಾಣ ಪ್ರಸಿದ್ಧ ದೇವಸ್ಥಾನವಾದ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಟ ಚತುರ್ಥಿ ಅಂಗವಾಗಿ ಭಕ್ತರು ಇಂದು ಕೋವಿಡ್ ಪೂರ್ವದಲ್ಲಿ ಆಗಮಿಸಿದಂತೆ ಬಂದು ನಾನಾ ಸೇವೆಯಲ್ಲಿ ಪಾಲ್ಗೊಂಡರು.ಅನೇಕರು ಸಂಕಷ್ಟಿ ಉಪವಾಸ ಆರಂಭಿಸಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ಮಂಗಳವಾರ ಬರುವ ಸಂಕಷ್ಟಿಗೆ ವಿಶೇಷ ಮಹತ್ವ ಇರುವ ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ.
ಪ್ರತೀ ಸಂಕಷ್ಟಿಯಂದು ನಾನಾ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಮತ್ತು ಚಂದ್ರೋದಯದ ಬಳಿಕ ನಡೆಯುವ ಅನ್ನ ಸಂತರ್ಪಣೆ ಕಾರ್ಯ ಇಂದಿನಿಂದ ಆರಂಭಗೊಂಡಿದೆ.
ಕೆಲವು ಸಮಯದಿಂದ ಮನೆಯಲ್ಲಿ ಕುಳಿತುಕೊಂಡು ಇದ್ದವರಿಗೆ, ದೇವಸ್ಥಾನಗಳು ತೆರವುಗೊಂಡು, ಸೇವೆಗಳು ಆರಂಭಗೊಂಡ ಬಳಿಕ ದೇವಸ್ಥಾನಗಳಿಗೆ ತೆರಳುವಂತೆ ಆಗಿರುವುದು ಭಕ್ತರಿಗೆ ಸಂತಸ ತಂದಿದೆ .