ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಸಿದ್ಧೇಶ್ವರ ಸಿದ್ದಿನಾಥ ದೇವಸ್ಥಾನದ ಎದುರು ಇರುವ ೪ ಎಕ್ರೆ ವಿಶಾಲವಾದ ಬೆಳ್ತಿಕೆರೆಯಲ್ಲಿ ಹೂಳು ಮತ್ತು ಕಳೆಗಿಡ ಬೆಳೆದಿದ್ದು, ಈ ಪ್ರದೇಶದ ಅಂತರ್ ಜಲ ಬತ್ತಿ ಹೋಗಿತ್ತು. ಕೆರೆಯನ್ನು ಸ್ವಚ್ಛ ಮಾಡುವುದು ಮತ್ತು ಸುತ್ತ ಮುತ್ತ ಹೂದೋಟ ಮಾಡುವ ನೆಲೆಯಲ್ಲಿ ಇಲ್ಲಿನ ಕೆರೆ ಅಭಿವೃದ್ಧಿ ಸಮಿತಿಯವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇವರ ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ ವಿರೇಂದ್ರ ಹೆಗ್ಗಡೆಯವರು ನಮ್ಮ ಊರು ನಮ್ಮಕೆರೆ ಯೋಜನೆಯಡಿಯಲ್ಲಿ ಆರ್ಥಿಕ ನೆರವಾಗಿ ೨.೯೦ ಲಕ್ಷ ನೀಡಿದ್ದರು. ರಾಜ್ಯ ಸರಕಾರ ಕೂಡಾ ೧ ಲಕ್ಷ ನೀಡಿದ ನೆರವಿನಿಂದ ಸಮಿತಿಯವರು ಜನವರಿ ತಿಂಗಳಿನಲ್ಲಿ ಕೆರೆಯಲ್ಲಿ ಇರುವ ಕಳೆಯನ್ನು ತೆಗೆದು ಸ್ವಚ್ಛಗೊಳಿಸಲಾಗಿತ್ತು. ಈ ಕೆರೆಯ ನಿಜ ಹೆಸರಿನಂತೆ ಬೆಳದಿಂಗಳ ಕೆರೆಯಾಗಿ ಕಂಗೊಳಿಸಿತ್ತು. ಆದರೂ ಅಳಿದುಳಿದ ಕಳೆಗಿಡಗಳು ಮತ್ತೆ ಜೀವ ಕಳೆ ಬಂದು ಕೆರೆಯನ್ನು ಮತ್ತೆ ಮುಚ್ಚುವ ಸಾದ್ಯತೆ ಇತ್ತು.
ಮಂಗಳವಾರ ಸಮಿತಿಯ ಸದಸ್ಯರು ಕೆರೆಯಲ್ಲಿ ಇರುವ ಕಳೆ ಗಿಡಗಳನ್ನು ನಾಲ್ಕಾರು ದೋಣಿಗಳ ಮೂಲಕ ಮಾನವ ಶಕ್ತಿಯಿಂದ ತೆಗೆದು ಇದೀಗ ಸ್ವಚ್ಛತೆ ಮಾಡಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೇಸಗೆಯಲ್ಲಿ ಇಲ್ಲಿನ ಪರಿಸರದಲ್ಲಿ ಈ ವರ್ಷ ಅಂತರ್ ಜಲ ಹೆಚ್ಚಿದ್ದು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗಿತ್ತು . ಇರುವ ಕೆರೆ ಸರೋವರಗಳನ್ನು ಮುಚ್ಚಿ ನಗರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಹೊಸತಾಗಿ ಕೆರೆ ಸರೋವರಗಳನ್ನು ಮಾಡಲಾಗದ ನಮಗೆ ಇರುವ ಪುರಾತನ ಕೆರೆಯನ್ನು ಅಭಿವೃದ್ಧಿ ಮಾಡುತ್ತಿರುವ ಯೋಜನೆಗೆ ಸಾರ್ವ ಜನಿಕರ ಸಹಕಾರ ,ನೆರವು ಅಗತ್ಯವಾಗಿದೆ.