ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಬಿಜೆಪಿ ಕಚೇರಿಗೆ ಆಗಮಿಸಿದ ಇಂಧನ ಸಚಿವ ಸುನೀಲ್ ಕುಮಾರ್ ರನ್ನು ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಿಂದ ಬರಮಾಡಿಕೊಂಡು ಪುಸ್ತಕ ನೀಡಿ ಗೌರವಿಸಿದರು.
ನಂತರ ಮಾತನಾಡಿದ ಸಚಿವ ಸುನಿಲ್ ಕುಮಾರ್, ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಮತ್ತು ಪಕ್ಷದ ಹಿರಿಯರು ಹಂತ ಹಂತವಾಗಿ ಬೆಳೆಸಿ ಶಾಸಕನಾಗಿಸಿ, ಸಚಿವನನ್ನಾಗಿಸಿದ್ದಾರೆ. ನನ್ನ ಮೇಲೆ ನಂಬಿಕೆ ಸಚಿವನಾಗಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ನೀಡಿದ ಖಾತೆಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
Advertisement. Scroll to continue reading.
ಈ ಭಾಗದ ಜನಪ್ರಿಯ ಶಾಸಕರಾದ ಹಾಲಾಡಿ ಶ್ರೀನಿವಾಸಣ್ಣ ಕಾಲ ಕಾಲಕ್ಕೆ ಉತ್ತಮ ಸಲಹೆಯನ್ನು ನೀಡಿ ನನಗೆ ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ವಾರ ಜಿಲ್ಲೆಯ ೫ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸೇರಿಕೊಂಡು ಸಭೆ ನಡೆಸಿ ಜಿಲ್ಲೆಗೆ ಅಗತ್ಯವಿರುವ ಯೋಜನೆಗಳ ಬಗ್ಗೆ ಚರ್ಚಿಸುತ್ತೇವೆ.
ಸಿ.ಆರ್.ಝಡ್ , ಡೀಮ್ಡ್ ಫಾರೆಸ್ಟ್ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನೆನೆಗುದಿಗೆ ಬಿದ್ದ ಯೋಜನೆಗಳನ್ನು ಯಾವ ರೀತಿ ಪರಿಹಾರ ಮಾಡಬಹುದು ಎಂದು ಚರ್ಚೆ ಮಾಡುತ್ತೇವೆ. ಸಾಧ್ಯವಾದಷ್ಟು ಅಭಿವೃದ್ದಿಯನ್ನು ಮಾಡಿ ಮುಂದಿನ ಹತ್ತು ವರ್ಷದಲ್ಲಿ ಉಡುಪಿಗೆ ಏನೆಲ್ಲಾ ಆಗಬೇಕು ಎಂಬುದರ ಕಲ್ಪನೆಯೊಂದಿಗೆ ಕಾರ್ಯ ನಡೆಸುತ್ತೇವೆ ಎಂದರು.
ವಾಜಪೇಯಿ ಅವರ ೬ ವರ್ಷದ ಸರಕಾರದ ಅವಧಿಯನ್ನು ಸುಶಾಸನ ಎಂದು ಹೇಳುತ್ತೇವೆ. ಈ ಅವಧಿಯಲ್ಲಿ ಅಭಿವೃದ್ಧಿ ಯಾವ ರೀತಿ ಇರಬೇಕು ಎಂಬ ಕಲ್ಪನೆ ಇದ್ದು ಈ ಮೋದಿಯವರು ಅದನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಜವಾಬ್ದಾರಿಯುತ ವಿರೋಧ ಪಕ್ಷಗಳು ಸಂಸತ್ ಅಧಿವೇಶನಕ್ಕೆ ಹಾಜರಾಗದೆ ಅಭಿವೃದ್ಧಿಗೆ ಅಡ್ಡ ಪಡಿಸುತ್ತಿದ್ದಾರೆ.
ಕರೋನಾದಿಂದಾಗಿ ಶಾಲೆಗಳು ಪ್ರಾರಂಭವಾಗಿಲ್ಲ, ದೇಶ ಸಂಕಷ್ಟದಲ್ಲಿದೆ. ಇವೆಲ್ಲದರ ಬಗ್ಗೆ ಚರ್ಚೆಗಳು ನಡೆಯುವ ಸಂದರ್ಭದಲ್ಲಿ ಚರ್ಚೆಗೆ ಹಾಜರಾಗದೇ ಇರುವುದು ದುರಂತ. ಇವರೆಲ್ಲಾ ವಾಜಪೇಯಿ ಅವರ ಆದರ್ಶಗಳನ್ನು ಪಾಲಿಸಿದರೇ ಉತ್ತಮ ಆಡಳಿತಕ್ಕೆ ಸಾಥ್ ನೀಡಿದಂತಾಗುತ್ತದೆ ಎಂದರು.
ಡಿಸೆಂಬರ್ ತಿಂಗಳಲ್ಲಿ ಜಿ.ಪಂ ಮತ್ತು ತಾ.ಪಂ ಚುನಾವಣೆ ಬರಲಿದ್ದು ಕಾರ್ಯಕರ್ತರೆಲ್ಲಾ ಶ್ರಮವಹಿಸಿ ಸಹಕಾರ ನೀಡಿ ಉಡುಪಿ ಜಿಲ್ಲೆಯಲ್ಲಿ ಜಿ.ಪಂ ಹಾಗೂ ತಾ.ಪಂ ಭಾಜಪ ತೆಕ್ಕೆಗೆ ಬರುವಂತೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ದ.ಕ ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್, ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಐರೋಡಿ ವಿಠ್ಠಲ ಪೂಜಾರಿ, ಸುರೇಶ್ ಶೆಟ್ಟಿ ಗೋಪಾಡಿ ಉಪಸ್ಥಿತರಿದ್ದರು
Advertisement. Scroll to continue reading.