ವರದಿ : ದಿನೇಶ್ ರಾಯಪ್ಪನಮಠ
ಕೋಟ: ಪ್ರಸಿದ್ಧ ನಾಟಕ ಸಂಸ್ಥೆಯಾದ ಕೋಶಿಕಾ ಚೇರ್ಕಾಡಿಯವರು ಇತ್ತೀಚೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ 30 ದಿನಗಳ ಕಾಲ ನಾಟಕ ಶಿಬಿರವನ್ನು ಏರ್ಪಡಿಸಿದ್ದರು. ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳಿಂದ, ಪ್ರಸಿದ್ದ ಸಾಹಿತಿ ದಾ.ರಾ.ಬೇಂದ್ರೆ ವಿರಚಿತ ಸಾಯೋ ಆಟ ಎಂಬ ನಾಟಕವನ್ನು ಪ್ರದರ್ಶಿಸಲ್ಪಟ್ಟಿತ್ತು.
ಪ್ರದರ್ಶನದ ಉದ್ಘಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಉಪೇಂದ್ರ ಸೋಮಯಾಜಿ ಮಾತನಾಡಿ, ಹವ್ಯಾಸಿ ನಾಟಕ ತಂಡಗಳಿಗೆ ನಾಟಕ ಸಿದ್ಧ ಪಡಿಸುವುದೇ ಸವಾಲಿನ ಕೆಲಸ. ನಾಟಕದ ಆಯ್ಕೆ, ನಟರನ್ನು ಹೊಂದಿಸುವುದು, ನಿರ್ದೇಶಕರನ್ನು ಹುಡುಕುವುದು, ಹಿಮ್ಮೇಳ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿ ನಾಟಕ ತಯಾರಾಗುತ್ತದೆ. ಹಾಗಾಗಿ ಇತ್ತೀಚೆಗೆ ಹೊಸ ನಾಟಕಗಳನ್ನು ತಯಾರಿಸುವ ತಂಡಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಠ ತೊಟ್ಟು ತರಬೇತಿ ನೀಡಿ ನಾಟಕವನ್ನು ಪ್ರದರ್ಶಿಸುತ್ತಿರುವ ಕೋಶಿಕಾಕ್ಕೆ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರೀಯ ನಾಟಕ ನಿರ್ದೇಶಕರಾದ ಗೋಪಾಲ ಕೃಷ್ಣ ನಾಯಿರಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಆಸಕ್ತರಿಗೆ ನಾಟಕದ ಬಗ್ಗೆ ಆಸಕ್ತಿ ಹುಟ್ಟಿಸಿದ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಮಾತನಾಡುತ್ತಾ ನಾಟಕ ರಂಗಭೂಮಿಯ ನಿರ್ದೇಶನ, ನಿರ್ದೇಶಕ, ಸಮಯಪಾಲನೆ ಇವುಗಳು ಯಕ್ಷಗಾನ ಕಲಾವಿದರು ಅನುಸರಿಸಬೇಕಾದ ವಿಚಾರ. ಶಿಬಿರದ ದಿನಗಳ ವಿಚಾರಗಳನ್ನು ಅವಲೋಕಿಸಿದ ಹೆಬ್ಬಾರರು ಸಂಸ್ಥೆಯ ಸಾಧನೆಯನ್ನು ಅಭಿನಂದಿಸಿದರು. ಗೀತಾ ಸಾಮಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಗವತಿ ಆನಗಳ್ಳಿಯವರು ಸ್ವಾಗತಿಸಿ, ವಂದಿಸಿದರು. ಮೇಘಶ್ಯಾಮ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.