ದೊಂಡೆರಂಗಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವ, ಕಂಚಿಲ ಸೇವೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ತುಳುನಾಡಿನಲ್ಲಿ ದೇವರುಗಳ ದೈವಗಳ ಮೇಲಿನ ನಂಬಿಕೆಯಲ್ಲಿ ಅದೆಷ್ಟೊ ಹರಕೆಗಳಿಂದ ಜನರಿಗೆ ಒಳಿತು ಆದ ಉದಾಹರಣೆಗಳಿವೆ. ಸಂತಾನಕ್ಕಾಗಿ ಮತ್ತು ಕೀರ್ತಿವಂತ ಮಕ್ಕಳ ಜನನಕ್ಕೆ ಕಂಚಿಲ ಸೇವೆ ಎನ್ನುವುದು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ದೊಂಡೆರಂಗಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇದೊಂದು ವಿಶೇಷ ಸೇವೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ.
ಇರ್ವತ್ತೂರು ಮಾಗಣೆಯ ಮುಟ್ಟಿಕಲ್ಲು ತಾನ ಗರಡಿ ಎಂದು ಕರೆಯುವ ಈ ಗರಡಿಯ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಹೆಚ್ಚಾಗಿ ಬಿಲ್ಲವ ಸಮುದಾಯದಲ್ಲಿ ಜನಿಸುವ ಮಕ್ಕಳಿಗೆ ಹೇಳಿಕೊಳ್ಳುವ ಹರಕೆಯೆ ಕಂಚಿಲ ಸೇವೆ. ಜನಿಸುವ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ ಇಲ್ಲಿನ ಕಾಲಾವಧಿ ನೇಮೋತ್ಸವದಂದು ಕಂಚಿಲ ಸೇವೆ ನಡೆಯುತ್ತದೆ.
ಸೇವೆ ಸಲ್ಲಿಸುವ ಮಕ್ಕಳು ಹಾಗೂ ಅವರ ತಂದೆ ತಾಯಿ ಕೆಲವು ದಿನ ವೃತನಿಷ್ಠರಾಗಿರಬೇಕು. ಅಲ್ಲದೇ ನೇಮೋತ್ಸವದಂದು ಕಂಚಿಲ ಸೇವೆ ನೀಡುವ ಮಗುವನ್ನು ಗರಡಿಯ ವ್ಯಾಪ್ತಿಯಲ್ಲಿ ನಡೆಸಿಕೊಂಡು ಹೋಗುವಂತಿಲ್ಲ. ತಂದೆ ಅಥವಾ ತಾಯಿ ಎತ್ತಿಕೊಂಡು ಗರಡಿಯ ಒಂದು ಭಾಗದಲ್ಲಿ ಸೇವೆಯ ವಸ್ತುವಿನೊಂದಿಗೆ ಕೂರಿಸಬೇಕು. ನೇಮೋತ್ಸವದ ಬಳಿಕ ಕಂಚಿಲ ಸೇವೆಯನ್ನು ನೀಡಲಾಗುತ್ತದೆ.
Advertisement. Scroll to continue reading.
ಸೇವೆ ನೀಡುವ ಮಗು ಹೊಸ ಬಟ್ಟೆಯೊಂದಿಗೆ ಮದುಮಗ/ ಮದುಮಗಳಂತೆ ಸಿಂಗಾರಗೊಂಡು ಹೊಸ ಬೆತ್ತದ ಬುಟ್ಟಿಯಲ್ಲಿ ಸಿಂಗಾರ ಹೂವು ಬಾಳೆಗೊನೆ ಅಕ್ಕಿ ಇನ್ನಿತರ ವಸ್ತುವನ್ನು ದೇವರಿಗೆ ಸಮರ್ಪಿಸಲಾಗುತ್ತದೆ. ಈ ವರ್ಷ ಕೂಡಾ ಶುಕ್ರವಾರ ಇಲ್ಲಿನ ದೈವಗಳಾದ ಕೊಡಮಣಿತ್ತಾಯ ಧರ್ಮರಸು, ಬ್ರಹ್ಮಬೈದರ್ಕಳ ,ಮಾಯಂದಾಲ ಮತ್ತು ಪರಿವಾರ ದೈವಗಳ ನೇಮೋತ್ಸವದಲ್ಲಿ 50 ಕ್ಕೂ ಹೆಚ್ಚು ಮಕ್ಕಳು ಸೇವೆ ನೀಡಿ ಹರಕೆ ಸಂದಾಯ ಮಾಡಿದರು.
ದೊಂಡೆರಂಗಡಿ ಬ್ರಹ್ಮ ಬೈದರ್ಕಳ ಗರಡಿಯು ಅತ್ಯಂತ ಪುರಾತನ ಕ್ಷೇತ್ರ. ಇಲ್ಲಿಗೆ ಊರ, ಪರವೂರಿನ ಮಂದಿ ಆಗಮಿಸುತ್ತಾರೆ. ಕಾರುಣಿಕ ಕ್ಷೇತ್ರವಾಗಿರುವ ಇಲ್ಲಿ ಕಂಚಿಲ ಸೇವೆ ನಡೆಯುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಗ್ರಾಮಸ್ಥರು ಕಂಚಿಲ ಸೇವೆ ನೀಡುವುದು ವಿಶೇಷ.ಸದಾನಂದ ಬಂಗೇರಾ