ಕೋಟ: ಕೋಡಿ ಕನ್ಯಾನ-ಪಾರಂಪಳ್ಳಿ ಪಡುಕೆರೆ ಮುಖ್ಯ ರಸ್ತೆಯಲ್ಲಿ ಅ.15 ರ ರಾತ್ರಿ 8-30 ರ ವೇಳೆ ಮೂರು ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಮೂವರು ಸವಾರರ ಪೈಕಿ ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರವಿ ಪೂಜಾರಿ(30) ಮೃತ ಬೈಕ್ ಸವಾರ. ಮೆಕ್ಯಾನಿಕ್ ಆಗಿದ್ದ ರವಿ ಕೋಟದಲ್ಲಿ ಗ್ಯಾರೇಜ್ ನಡೆಸುತ್ತಿದ್ದರು. ತಂದೆ,ತಾಯಿಗೆ ಒಬ್ಬನೇ ಮಗನಾಗಿ ಮನೆಗೆ ಆಧಾರ ಸ್ತಂಭವಾಗಿದ್ದರು ಎನ್ನಲಾಗಿದೆ.
ಪ್ರಶಾಂತ ಎಂಬವರು ಬೈಕನ್ನು ಕೋಡಿ ಕನ್ಯಾನ ಕಡೆಯಿಂದ ಪಡುಕೆರೆ ಕಡೆಗೆ ಅತೀವೇಗದಿಂದ ಬರುತ್ತಿದ್ದ ವೇಳೆ ಸೂಚನೆ ಇಲ್ಲದೇ ನಿರ್ಲಕ್ಷವಾಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದು ಒಮ್ಮೆಲೆ ಬಲಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಕೋಡಿ ಕನ್ಯಾನ ಕಡೆಯಿಂದ ಪಡುಕೆರೆ ಕಡೆಗೆ ಬರುತ್ತಿದ್ದ ರವಿ ಪೂಜಾರಿ ಬೈಕ್ ಎದುರಿನಿಂದ ಬರುತ್ತಿದ್ದ ಚರಣ್ರವರ ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮೂರೂ ಬೈಕ್ಗಳು ರಸ್ತೆಗೆ ಎಸೆಯಲ್ಪಟ್ಟಿವೆ.
Advertisement. Scroll to continue reading.
ಪರಿಣಾಮ ಸವಾರರಾದ ರವಿ ಪೂಜಾರಿ, ಚರಣ್ ಕುತ್ತಿಗೆಗೆ ಎದೆಗೆ ಸೇರಿ ಗಂಭೀರ ಗಾಯವಾಗಿದ್ದು, ಪ್ರಶಾಂತ ಎಂಬವರಿಗೆ ಕೈಗೆ ಗಾಯವಾಗಿತ್ತು. ಮೂವರನ್ನೂ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಪಘಾತಕ್ಕೆ ಕಾರು ಚಾಲಕ ಸೂಚನೆ ನೀಡದೇ ನಿರ್ಲಕ್ಷವಾಗಿ ನಿಲ್ಲಿಸಿರುವುದು ಮತ್ತು ಬೈಕ್ ಸವಾರ ಪ್ರಶಾಂತ್ ಅವರ ಅತೀವೇಗ ಹಾಗೂ ನಿರ್ಲಕ್ಷ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.