ಹೈದರಾಬಾದ್ : ತೆಲಂಗಾಣದಲ್ಲಿ ಗುರುವಾರ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಮಧ್ಯರಾತ್ರಿ ಆಂಧ್ರ ಪ್ರದೇಶ ಸರ್ಕಾರವು ಕೃಷ್ಣಾ ನದಿಯ ನಾಗಾರ್ಜುನ ಸಾಗರ ಅಣೆಕಟ್ಟಿನ ಅರ್ಧ ಭಾಗವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಅಲ್ಲದೇ, ಗೇಟ್ಗಳ ಮೂಲಕ ತನ್ನ ಭಾಗಕ್ಕೆ ನೀರು ಬಿಡುಗಡೆ ಮಾಡಿದೆ. ಇದು ತೆಲಂಗಾಣದಲ್ಲಿ ಆಕ್ರೋಶ ಹುಟ್ಟು ಹಾಕಿದೆ.
ಅಣೆಕಟ್ಟು ವಶಕ್ಕೆ ಪಡೆದುಕೊಂಡು ನೀರು ಬಿಡುಗಡೆ ಮಾಡಿದ ಬಳಿಕ ಆಂಧ್ರಪ್ರದೇಶ ಪೊಲೀಸರ ವಿರುದ್ಧ ನಲ್ಗೊಂಡ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲು ಮಾಡಲಾಗಿದೆ. ಆಂಧ್ರ ಪ್ರದೇಶದಿಂದ ತೆಲಂಗಾಣ 2014ರಲ್ಲಿ ಪ್ರತ್ಯೇಕಗೊಂಡಾಗಿನಿಂದ ಎರಡೂ ರಾಜ್ಯಗಳು ನೀರಿಗಾಗಿ ಕಿತ್ತಾಡಿಕೊಳ್ಳುತ್ತಿವೆ. ಇದೀಗ ಮಧ್ಯ ರಾತ್ರಿ ಆಂಧ್ರ ಅಣೆಕಟ್ಟಿನ ಅರ್ಧ ಭಾಗವನ್ನು ವಶಕ್ಕೆ ಪಡೆದುಕೊಳ್ಳುವವರೆಗೆ ತಲುಪಿದೆ.
ಆಂಧ್ರ ಪ್ರದೇಶ ಸರ್ಕಾರದ ನಡೆಯ ವಿರುದ್ಧ ತೆಲಂಗಾಣದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರವು ಕೃಷ್ಣಾ ನದಿ ನಿರ್ವಹಣಾ ಮಂಡಳಿಗೆ (ಕೆಆರ್ಎಂಬಿ) ದೂರು ಸಲ್ಲಿಸಿದೆ. ಈಗಾಗಲೇ ಕೆಆರ್ಎಂಬಿ ಎರಡೂ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿದೆ.
ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಂಧ್ರ ಪೊಲೀಸ್ ಇಲಾಖೆಗೆ ಸೇರಿದ 600 ಪೊಲೀಸರು ಅಣೆಕಟ್ಟಿಗೆ ನುಗ್ಗಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ತೆಲಂಗಾಣ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದರು. ಮತ್ತು 36 ಗೇಟ್ಗಳಲ್ಲಿ ಅರ್ಧದಷ್ಟನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ತೆಲಂಗಾಣ ಅಧಿಕಾರಿಗಳು ಮತ್ತು ನಲ್ಗೊಂಡದ ಕೆಲವು ಪೊಲೀಸರು ಅಣೆಕಟ್ಟಿಗೆ ಆಗಮಿಸಿದಾಗ ಆಂಧ್ರ ಪ್ರದೇಶದ ಅಧಿಕಾರಿಗೊಂದಿಗೆ ವಾಗ್ವಾದ ಏರ್ಪಟ್ಟಿತ್ತು. ತಮ್ಮ ಸರ್ಕಾರದ ನಿರ್ದೇಶನದ ಮೇರೆಗೆ ನಾವು ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆಂಧ್ರದ ಅಧಿಕಾರಿಗಳು ಹೇಳಿದ್ದರಿಂದ ಕೊನೆಗೆ ತೆಲಂಗಾಣ ಅಧಿಕಾರಿಗಳು ವಾಪಸಾಗಿದ್ದರು.
ಮೂರು ವರ್ಷಗಳ ಹಿಂದೆಯೂ ಆಂಧ್ರದ ಅಧಿಕಾರಿಗಳು ಇದೇ ರೀತಿಯ ಪ್ರಯತ್ನ ನಡೆಸಿದ್ದರು. ಆದರೆ ಇದನ್ನು ವಿಫಲಗೊಳಿಸಲಾಗಿತ್ತು ಎಂದು ತೆಲಂಗಾಣದ ಅಧಿಕಾರಿಗಳು ತಿಳಿಸಿದ್ದಾರೆ.
10,000 ಕ್ಯೂಸೆಕ್ ನೀರು ಬಿಡುಗಡೆ :
ನಮ್ಮ ಮಾಹಿತಿ ಪ್ರಕಾರ ಆಂಧ್ರ ಪ್ರದೇಶ ಸರ್ಕಾರವು 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆ. ಅವರು ನಿಯಂತ್ರಕ ಗೇಟ್ಗಳಿಗೆ ಪ್ರತ್ಯೇಕ ವಿದ್ಯುತ್ ಲೈನ್ಗಳನ್ನು ಒದಗಿಸಿದ್ದಾರೆ. ಇದರರ್ಥ ಆಂಧ್ರ ಪ್ರದೇಶ ಕಳೆದ ಕೆಲವು ವಾರಗಳಿಂದ ಇದನ್ನು ಯೋಜಿಸುತ್ತಿತ್ತು. ಅವರು ಅಣೆಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸ್ವಯಂಚಾಲಿತ ಪ್ರವೇಶ ದ್ವಾರವನ್ನು ಸಹ ಹಾನಿಗೊಳಿಸಿದ್ದಾರೆ ಎಂದು ಸಿಎಂ ಕೆಸಿಆರ್ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ.
ಆದರೆ, ನಾವು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೃಷ್ಣಾ ನದಿಯ ನಾಗಾರ್ಜುನ ಸಾಗರ ಬಲ ಕಾಲುವೆಯಿಂದ ನೀರು ಬಿಡುತ್ತಿದ್ದೇವೆ ಎಂದು ಆಂಧ್ರ ಪ್ರದೇಶ ರಾಜ್ಯದ ನೀರಾವರಿ ಸಚಿವ ಅಂಬಟಿ ರಾಂಬಾಬು ಎಕ್ಸ್ನಲ್ಲಿ ಗುರುವಾರ ಬೆಳಿಗ್ಗೆ ಪೋಸ್ಟ್ ಹಾಕಿದ್ದರು.
ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವಿನ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಸೇರಿದ ನೀರನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು.
ಕೇಂದ್ರ ಮಧ್ಯ ಪ್ರವೇಶ :
ಉದ್ವಿಗ್ನತೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ್ದು, ನವೆಂಬರ್ 28 ರಂತೆ ನಾಗಾರ್ಜುನ ಸಾಗರ ನೀರನ್ನು ಬಿಡುಗಡೆ ಮಾಡುವಂತೆ ಎರಡೂ ರಾಜ್ಯಗಳನ್ನು ಒತ್ತಾಯಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ತೆಲಂಗಾಣ ಮತ್ತು ಆಂಧ್ರ ಪ್ರದೇಶದೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಈ ಪ್ರಸ್ತಾಪವನ್ನು ಮಾಡಿದ್ದು, ಇದಕ್ಕೆ ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿವೆ.
ಹೆಚ್ಚಿನ ಘರ್ಷಣೆಯನ್ನು ತಪ್ಪಿಸಲು ಅಣೆಕಟ್ಟನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲ್ವಿಚಾರಣೆ ಮಾಡಲಿದೆ. ಅಲ್ಲದೆ, ಇದು ಒಪ್ಪಂದದ ಪ್ರಕಾರ ಎರಡೂ ರಾಜ್ಯಗಳಿಗೆ ನೀರು ಬಿಡುಗಡೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದೆ.