ಕರಾವಳಿ

ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಕೊಟ್ಟರೆ ಬಿಜೆಪಿ ಸೇರ್ಪಡೆ: ಅರುಣ್ ಪುತ್ತಿಲ

0

ದಕ್ಷಿಣ ಕನ್ನಡ : ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಚಲನ ಸೃಷ್ಠಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತೆ ಬಿಜೆಪಿಯತ್ತ ಬರಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಹರಿದಾಡುತ್ತಿದೆ.

ಈ ಹಿಂದೆ ಪುತ್ತಿಲ ಅವರು ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ವದಂತಿ ಇತ್ತು. ವಿಧಾನಸಭೆ ಚುನಾವಣೆಯ ನಂತರದ ಬೆಳವಣಿಗೆಗಳಲ್ಲಿ ಪುತ್ತಿಲ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ ಅವರ ಜತೆ ಮಾತುಕತೆ ನಡೆಸಿ ಬಂದಿದ್ದರು. ಆದಾಗ್ಯೂ, ನಂತರ ನಡೆದ ಸ್ಥಳೀಯ ಕೆಲವು ಉಪ ಚುನಾವಣೆಗಳಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಂದು ಕಡೆ ಗೆಲುವೂ ಪುತ್ತಿಲ ಪರಿವಾರದ್ದಾಗಿತ್ತು.

ಈ ನಡುವೆ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಬಿಜೆಪಿಗೆ ಸೇರ್ಪಡೆ ಆಗುವುದಾಗಿ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದಿಂದ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ‌.

Advertisement. Scroll to continue reading.

ಈ ಬಗ್ಗೆ ಸ್ವತಃ ಅರುಣ್ ಪುತ್ತಿಲ, ವಿಧಾನಸಭಾ ಚುನಾವಣೆ ನಂತರ ಪುತ್ತಿಲ ಪರಿವಾರ ಸಕ್ರಿಯವಾಗಿದೆ. ಜಿಲ್ಲಾಧ್ಯಕ್ಷ ಸ್ಥಾನ ಸಿಗಬೇಕು ಎಂಬ ಒತ್ತಾಯ ಪುತ್ತಿಲ ಪರಿವಾರದಲ್ಲಿ ಇತ್ತು. ಆದರೆ, ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಬಳಿಕ ಪುತ್ತೂರು ಮಂಡಲದ ಸ್ಥಾನದ ಮಾತುಕತೆ ಆಗಿದೆ. ಆದಷ್ಟು ಬೇಗ ತೀರ್ಮಾನವನ್ನು ಪ್ರಕಟಿಸಲು ಬಿಜೆಪಿಗೆ ಒತ್ತಾಯ ಮಾಡಲಾಗಿದೆ. ಕಾರ್ಯಕರ್ತರ ಯೋಚನೆ ಮತ್ತು ಭಾವನೆಯ ಈ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನ ಕೊಟ್ಟರೆ ಬೇಷರತ್‌ ಬಿಜೆಪಿ ಪಕ್ಷ ಸೇರಬೇಕು ಅಂತ ಮಾಜಿ ಶಾಸಕರೊಬ್ಬರು ಹೇಳಿದ್ದರು. ಮಾತೃ ಪಕ್ಷಕ್ಕೆ ಸೇರಬೇಕು ಎನ್ನುವುದು ಹಿರಿಯರ ಅಪೇಕ್ಷೆಯಾಗಿತ್ತು. ಪುತ್ತೂರಿನ ಘಟನೆ ಪಕ್ಷಕ್ಕೆ ಮುಜುಗರ ತಂದಿದೆ ಅಂತ ಹಿರಿಯರು ಹೇಳಿದ್ದರು. ಆದರೆ, ಪುತ್ತೂರಿನಲ್ಲಿ ಸ್ವಾರ್ಥ ಮತ್ತು ಸ್ವಜನಪಕ್ಷಪಾತದ ದೃಷ್ಟಿಯಿಂದ ಕೆಲವರು ವಿರೋಧ ಮಾಡಿದ್ದಾರೆ. ಹೀಗಾಗಿ ಇವತ್ತು ಕಾರ್ಯಕರ್ತರ ಅಪೇಕ್ಷೆ ಪೂರೈಸಲು ಪಕ್ಷ ನಿರ್ಧಾರ ತೆಗೆದುಕೊಳ್ಳಲಿ. ನಾನು ಯಾವುದೇ ಸಂಘದ ಮತ್ತು ಪಕ್ಷದ ಹಿರಿಯರ ಬಗ್ಗೆ ಅಗೌರವ ತೋರಿಸಿಲ್ಲ. ಇದು ಅಪಪ್ರಚಾರ ಮತ್ತು ಸೇರ್ಪಡೆಗೆ ವಿರೋಧ ಇರೋ ತಂಡದ ಕುತಂತ್ರವಾಗಿದೆ ಎಂದು ಹೇಳಿದರು.

ಬಿಜೆಪಿಯವರೇ ಮಾತುಕತೆಯಲ್ಲಿ ಮಂಡಲದ ಜವಾಬ್ದಾರಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮಾತು ಅವರು ಉಳಿಸಿಕೊಳ್ಳಲಿ, ನಾವು ನಮ್ಮ ಮಾತು ಉಳಿಸಿಕೊಳ್ತೇವೆ. ನಾನು ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿಯವರ ಜೊತೆ ಮಾತುಕತೆ ಮಾಡಿದ್ದೇನೆ. ಅಣ್ಣಾಮಲೈ, ಸಂಸದ ನಳಿನ್ ಕಟೀಲ್ ಜೊತೆಗೂ ಮಾತುಕತೆ ಆಗಿರೋದು ಸತ್ಯ. ನಮಗೆ ಬಿಜೆಪಿ ಜೊತೆ ವಿಲೀನಕ್ಕೆ ಯಾವುದೇ ವಿರೋಧ ಇಲ್ಲ. ನಮ್ಮ ಅಪೇಕ್ಷೆ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಬಾರದು. ಪಕ್ಷದ ಒಳಗೆ ಬಂದ ನಂತರ ಲೋಕಸಭೆಗೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಲಿ. ಪಕ್ಷದ ಒಳಗೆ ಬಂದ ನಂತರ ಸೂಚನೆ ಪ್ರಕಾರ ಕೆಲಸ ಮಾಡ್ತೇವೆ ಎಂದು ಅವರು ಹೇಳಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com