ರಾಷ್ಟ್ರೀಯ

ವಯನಾಡಿನಲ್ಲಿ ರಾಹುಲ್ ಗಾಂಧಿ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮೇಲಿದೆ 242 ಕ್ರಿಮಿನಲ್‌ ಕೇಸ್‌..!

0

ತಿರುವನಂತಪುರಂ: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಮೇಲೆ ಬರೋಬ್ಬರಿ 242 ಕ್ರಿಮಿನಲ್ ಕೇಸ್‌ಗಳಿವೆ.

ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಕೆ ಸುರೇಂದ್ರನ್‌ ಅವರು ತಮ್ಮ ಮೇಲಿರುವ ಪ್ರಕರಣಗಳ ವಿವರ ನೀಡಬೇಕಿದೆ. ಅದರಂತೆ ಅವರು ಇತ್ತೀಚೆಗೆ ತಮ್ಮ ಮೇಲಿನ ಪ್ರಕರಣಗಳ ವಿವರಗಳನ್ನು ಪಕ್ಷದ ಮುಖವಾಣಿಯಲ್ಲಿ ಪ್ರಕಟಿಸಿದ್ದರು. ಇದರಲ್ಲಿ ಪೂರ್ತಿ ಮೂರು ಪುಟ ಅವರ ಮೇಲಿನ ಪ್ರಕರಣಗಳೇ ತುಂಬಿದ್ದವು.

ಇದಲ್ಲದೆ ಎರ್ನಾಕುಲಂನ ಬಿಜೆಪಿ ಅಭ್ಯರ್ಥಿ ಕೆಎಸ್ ರಾಧಾಕೃಷ್ಣನ್ ವಿರುದ್ಧವೂ ಇದೇ ರೀತಿ ಸುಮಾರು 211 ಪ್ರಕರಣಗಳಿವೆ. “ಇದರಲ್ಲಿ ಹೆಚ್ಚಿನ ಪ್ರಕರಣಗಳು 2018ರಲ್ಲಿ ನಡೆದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದವು. ಹೆಚ್ಚಿನ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಪಕ್ಷದ ಮುಖಂಡರು ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ. ಈ ಪ್ರಕರಣಗಳಲ್ಲಿ ಹೆಚ್ಚಿನವು ಇವೇ ಆಗಿವೆ ,” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ತಿಳಿಸಿದ್ದಾರೆ. ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement. Scroll to continue reading.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಶುಕ್ರವಾರ ಸುರೇಂದ್ರನ್, ರಾಧಾಕೃಷ್ಣನ್ ಹಾಗೂ ಪಕ್ಷದ ಅಲಪ್ಪುಳ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ವಟಕರ ಅಭ್ಯರ್ಥಿ ಪ್ರಫುಲ್ ಕೃಷ್ಣ ವಿರುದ್ಧದ ಪ್ರಕರಣಗಳ ವಿವರಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಕರಣಗಳ ವಿವರ ಹಂಚಿಕೊಂಡಿರುವ ಅವರು, “ಭಾರತದ ಕೆಲವು ಭಾಗಗಳಲ್ಲಿ ರಾಷ್ಟ್ರೀಯವಾದಿಯಾಗುವುದು ತುಂಬಾ ಕಷ್ಟ” ಎಂದು ಬಣ್ಣಿಸಿದ್ದಾರೆ.

“ಭಾರತದ ಕೆಲವು ಭಾಗಗಳಲ್ಲಿ ರಾಷ್ಟ್ರೀಯವಾದಿಯಾಗುವುದು ಕಷ್ಟ. ಇದು ದೈನಂದಿನ ಹೋರಾಟ. ಆದರೆ, ಹೋರಾಟಕ್ಕೆ ಇದು ಯೋಗ್ಯವಾಗಿದೆ,” ಎಂದು ಬಿಎಲ್‌ ಸಂತೋಷ್‌ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ರಾಜ್ಯ ಮುಖ್ಯಸ್ಥ ಕೆ ಸುರೇಂದ್ರನ್‌ ವಿರುದ್ಧದ ಪ್ರಕರಣಗಳ ವಿವರವನ್ನು ನೀಡಿರುವ ಕುರಿಯನ್, ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ ಅವರ ವಿರುದ್ಧ 237 ಪ್ರಕರಣಗಳು ದಾಖಲಾಗಿವೆ. ಇನ್ನುಳಿದ ಐದು ಪ್ರಕರಣಗಳು ವಿವಿಧ ಪ್ರತಿಭಟನೆಗೆ ಸಂಬಂಧಿಸಿದವು ಎಂದು ತಿಳಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಬೆಟ್ಟದಲ್ಲಿರುವ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸಲು ಹೊರಟ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು 2018ರಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿದ್ದವು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com