ಕಟಪಾಡಿ : ಶಂಕರಪುರ ದ್ವಾರಕಾಮಾಯಿ ಸಾಯಿ ಮಂದಿರದಲ್ಲಿ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ ಸಂಕಲ್ಪ ದಿನಾಚರಣೆ
Published
0
ಕಾಪು: ಸರ್ಕಾರದ ವತಿಯಿಂದ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡಲು ಮತ್ತು ಗಾಯಗೊಂಡ ಜೀವಿಗಳ ಆರೈಕೆಗೆ ಸ್ಥಳ ಗುರುತಿಸಲು ಅನೇಕ ಬಾರಿ ಮನವಿ ಮಾಡಲಾಗಿದ್ದು,ಅದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಗುರೂಜಿ ಸಾಯಿ ಈಶ್ವರ್ ಹೇಳಿದರು. ಅವರು ಮಾ.16 ರಂದು ಶಂಕರಪುರ ದ್ವಾರಕಾಮಾಯಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ “ಪುಣ್ಯ ಸಂಕಲ್ಪ ದಿನ”ವನ್ನು ಉದ್ಘಾಟಿಸಿ ಮಾತನಾಡಿದರು. ಸಾಯಿ ಮಂದಿರದ ಪ್ರಧಾನ ಅರ್ಚಕರು ದಯಾಕರ್ ಭಟ್ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಪುಣ್ಯ ಸಂಕಲ್ಪ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಟ್ರಸ್ಟ್ ನ ಮೋಕ್ಷ ವಾಹನದ ಚಾಲಕರಾದ ಬಸವರಾಜ ಅಮಲಜರಿಯವರನ್ನು ಶಾಲು ಹೊದಿಸಿ ಟ್ರಸ್ಟಿ ವಿಶ್ವನಾಥ ಸುವರ್ಣ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ಮೆಂಡನ್, ಪ್ರಾಣಿ ಪಕ್ಷಿ ಮೋಕ್ಷ ವಾಹನದ ಸಂಚಾಲಕರಾದ ಪ್ರಕಾಶ್ ಆಚಾರ್ಯ, ಪ್ರಧಾನ ಅರ್ಚಕರಾದ ದಯಾಕರ್ ಭಟ್, ಟ್ರಸ್ಟಿ ವಿಶ್ವನಾಥ ಸುವರ್ಣ, ಸತೀಶ್ ದೇವಾಡಿಗ, ರಾಮಚಂದ್ರ ಕರ್ಕೇರ, ನಾಗೇಶ್ ಕಾಪು, ಸುಪ್ರೀತಾ, ಶ್ವೇತಾ ಉಪಸ್ಥಿತರಿದ್ದರು.
ಕಳೆದ ಐದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದಲ್ಲಿ ಮೃತಪಟ್ಟ ಸಾವಿರಾರು ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುವ ಸೇವಾ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ (ರಿ) ಪ್ರತಿ ವರ್ಷ ಮಾ .16ರಂದು ವಿಶ್ವ ಪ್ರಾಣಿ ಪಕ್ಷಿಗಳ ಮೋಕ್ಷ “ಪುಣ್ಯ ಸಂಕಲ್ಪ ದಿನ” ಆಚರಿಸಿಕೊಂಡು ಬರುತ್ತಿದೆ.