ಅಸ್ಸಾಂ: ಅಸ್ಸಾಂ ರಾಜ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಇಂದು ಬೆಳಿಗ್ಗೆ 7.51ರ ಹೊತ್ತಿಗೆ ಅಸ್ಸಾಂನ ಗುವಾಹಣಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಭೂಕಂಪಿಸಿದೆ. ರಸ್ತೆಗಳಲ್ಲಿ ಬಿರುಕು ಕಂಡುಬಂದಿದೆ. ಮನೆಗಳ ಛಾವಣಿ ಕುಸಿದಿವೆ. ನಾಗಾಂವ್ ನಲ್ಲಿ ಭೂಕಂಪಕ್ಕೆ ಕಟ್ಟಡವೊಂದು ವಾಲಿ ಪಕ್ಕದ ಕಟ್ಟಡಕ್ಕೆ ತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಅವರ ಜೊತೆಗೆ ಭೂಕಂಪ ಸಂಭವಿಸಿರುವ ಬಗ್ಗೆ ಮಾತನಾಡಿ, ಮಾಹಿತಿ ಪಡೆದಿದ್ದು, ರಾಜ್ಯಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡಿದ್ದೇನೆ. ಅಸ್ಸಾಂ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ, ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ. ಅಸ್ಸಾಂ ಮುಖ್ಯ ಮಂತ್ರಿ ಸರ್ಬಾನಂದ ಸೋನೊವಾಲ್ ಈ ಬಗ್ಗೆ, ರಾಜ್ಯದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಎಲ್ಲರೂ ಎಚ್ಚರವಾಗಿರಿ. ಎಲ್ಲಾ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.