ಕುಂದಾಪುರದಲ್ಲಿ ಮನೆ ಮನಗಳಲ್ಲಿ ಕಾರ್ಮಿಕರ ದಿನಾಚರಣೆ; ಲಾಕ್ ಡೌನ್ ಬಾದಿತ ಕಾರ್ಮಿಕರ ಸಮಸ್ಯೆ ಪರಿಹರಿಸಲು ಆಗ್ರಹ
Published
0
ಕುಂದಾಪುರ: ಲಾಕ್ ಡೌನ್ ಪರಿಣಾಮ ಕುಂದಾಪುರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಸಿಐಟಿಯು ಸಂಘಟನೆಯ ಕಾರ್ಮಿಕರು ಮನೆಮನಗಳಲ್ಲಿ, ಕಛೇರಿಗಳಲ್ಲಿ,ಕೆಲಸದ ಸ್ಥಳಗಳಲ್ಲಿ ಕೆಂಬಾವುಟ ಹಿಡಿದು ಆಚರಿಸಿದರು. ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಕೆ.ಶಂಕರ್ ಸಿಐಟಿಯು ಧ್ವಜಾರೋಹಣ ನೆರವೇರಿಸಿದರು.
ಬೇಡಿಕೆ ಫಲಕ ಹಿಡಿದು ಘೋಷಣೆ ಕೂಗಿದ ಕಾರ್ಯಕರ್ತರು ಲಾಕ್ ಡೌನ್ ಬಾದಿತ ಕಾರ್ಮಿಕರಿಗೆ ಪೂರ್ಣವೇತನ ಖಾತ್ರಿ ಪಡಿಸಬೇಕು,ಎಲ್ಲರಿಗೂ ಕೋವಿಡ್ ಲಸಿಕೆ ಕೊರತೆಯಾಗದಂತೆ ಜನರ ಜೀವ ಉಳಿಸಲು ಸರಕಾರಿ ಹಾಗು ಖಾಸಗೀ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ, ಆಮ್ಲಜನಕ, ಔಷಧಿ ನೀಡಬೇಕು.ಜೀವಗಳನ್ನು ಉಳಿಸಿ ಪರಿಹಾರ ಒದಗಿಸಿರಿ,ಪ್ರತಿ ಕುಟುಂಬಕ್ಕೂ ರೂ.10ಸಾವಿರ ಆರ್ಥಿಕ ನೆರವು ನೀಡಬೇಕು,ತಲಾ 10 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಬೇಕು.ಸರಕಾರಿ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯರನ್ನು ಅಗತ್ಯ ಸಿಬ್ಬಂದಿಗಳನ್ನು ಕೈ ಮೀರುವ ಮುಂಚೆ ನೇಮಕ ಮಾಡಬೇಕು. ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡಿರುವ ಖಾಸಗೀ ಬಸ್ಸು ನೌಕರರಿಗೆ,ಆಟೋ ಗೂಡ್ಸ್ ಚಾಲಕರಿಗೆ,ಮೀನು ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಪರಿಹಾರಧನ ಘೋಷಿಸಬೇಕು ಎಂದು ಆಗ್ರಹಿಸಲಾಯಿತು. ಗುರುತು ಚೀಟಿ ಇರುವ ಕಾರ್ಮಿಕರು ಕೆಲಸಕ್ಕೆ ಹೋಗಿ ಬರುವಾಗ ಕೆಲವು ಪೊಲೀಸ್ ಸಿಬ್ಬಂದಿಗಳು ಕೆಲವು ಕಡೆಗಳಲ್ಲಿ ಕಾರ್ಮಿಕರ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಬೆದರಿಸುತ್ತಿರುವುದನ್ನು ಖಂಡಿಸಲಾಯಿತು.
ಹಂಚು ಕಾರ್ಮಿಕರು ಕಾರ್ಖಾನೆಗಳಲ್ಲಿ,ಕಟ್ಟಡ ಕಾರ್ಮಿಕರು ಕೆಲಸದ ಸ್ಥಳಗಳಲ್ಲಿ, ಬೀಡಿ ಕಾರ್ಮಿಕರು, ರಿಕ್ಷಾ,ಅಂಗನವಾಡಿ, ಬಿಸಿಯೂಟ ನೌಕರರು ಮನೆಗಳಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಿದರು. ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕರಾದ ಎಚ್ ನರಸಿಂಹ, ಮಹಾಬಲ ವಡೇರಹೋಬಳಿ, ಬಲ್ಕೀಸ್ ಮುಂತಾದವರಿದ್ದರು.