ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಲಾಕ್ ಡೌನ್ ನಿಂದಾಗಿ ಕೋವಿಡ್ ಪಾಸಿಟಿವ್ ಸಂಖ್ಯೆ ಕಡಿಮೆಯಾಗುತ್ತಿದೆ. ಸಾವು ನೋವುಗಳು ಕಮ್ಮಿಯಾಗಿದೆ. ಆ ದೃಷ್ಟಿಯಿಂದ ಲಾಕ್ ಡೌನ್ ಮಾಡುವುದು ಸೂಕ್ತವೆಂದು ಹಲವಾರು ಮಂತ್ರಿಗಳು, ತಜ್ಞರು, ಕೋವಿಡ್ ತಜ್ಞರು ಲಾಕ್ ಡೌನ್ ಮುಂದುವರೆಸಲು ತಿಳಿಸಿದ್ದಾರೆ. ಲಾಕ್ ಡೌನ್ ಮಾಡುವಂತದ್ದು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿರುವಂತದ್ದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಹಾನಿಗೀಡಾಗಿ ಮರವಂತೆ ತೀರ ಪ್ರದೇಶಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಶೀಘ್ರವೇ ಪರಿಹಾರ ವಿತರಣೆ
ಚಂಡಮಾರುತದ ಪರಿಣಾಮದಿಂದಾಗಿ 106 ಮನೆಗಳಿಗೆ ಹಾನಿಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ತೆಂಗಿನ ಮರಗಳು, ಸೇತುವೆ, ಕಟ್ಟಡಗಳು, ರಸ್ತೆಗಳಿಗೂ ಹಾನಿಯಾಗಿದೆ. ಎರಡು ದಿನಗಳೊಳಗೆ ಯಾರ ಮನೆಗೆ ಹಾನಿಯಾಗಿದೆಯೋ ಅವರಿಗೆ ತಕ್ಷಣವೇ 10,000 ರೂ. ಕೊಡುವಂತೆ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಹೇಳಿದ್ದೇನೆ. ಪಾರ್ಶಿಯಲ್ ಹೋದವರಿಗೆ ಒಂದು ಲಕ್ಷ ರೂ., ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮೊದಲ ಕಂತಿನಲ್ಲಿ ಒಂದು ಲಕ್ಷ ರೂ.ಯಂತೆ ಒಟ್ಟು 5 ಲಕ್ಷ ರೂ. ಕೊಡಲು ಸೂಚಿಸಲಾಗಿದೆ.
ಕೆಲವೆಡೆ ಕರೆಂಟ್ ಲೈನ್ಸ್ ಬಿದ್ದಿವೆ. ಕೆಲವೆಡೆ ಕರೆಂಟ್ ಇಲ್ಲ. ಕೂಡಲೇ ದುರಸ್ಥಿ ಕಾರ್ಯ ನಡೆಸಲು ಸೂಚಿಸಲಾಗಿದೆ. ಎನ್ ಡಿ ಆರ್ ಎಫ್ ಹಣವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡ್ತೀನಿ. ರಸ್ತೆ ಮರು ನಿರ್ಮಾಣಕ್ಕೆ ಹತ್ತು ಹನ್ನೆರಡು ಕೋಟಿ ಬೇಕಾದೀತು. ಈ ದೊಡ್ಡ ಮಟ್ಟದ ಹಾನಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಮಳೆಗಾಲ ಶುರುವಾಗಲಿದ್ದು, ಶೀಘ್ರದಲ್ಲೇ ರಸ್ತೆ ನಿರ್ಮಿಸಲಾಗುವುದು. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.
Advertisement. Scroll to continue reading.