ಕರ್ನಾಟಕ ಕಲಾವಿದರ ಸಂಘದ ಕಟ್ಟಡದ ಮೇಲೆ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರು ಇಲ್ಲವೆಂದು ನಟ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ. ಡಾ.ರಾಜ್ ಕುಮಾರ್ ಭವನ, ಡಾ. ಅಂಬರೀಷ್ ಆಡಿಟೋರಿಯಂ ಹೆಸರಿದೆ. ಅವರಿಬ್ಬರು ದಿಗ್ಗಜರು. ಅವರ ಹೆಸರು ಸೂಕ್ತ. ಆದರೆ, ನಟ ವಿಷ್ಣುವರ್ಧನ್ ಹೆಸರು ಇಲ್ಲವೇಕೆ? ಈ ಬಗ್ಗೆ ಭಾರತಿ ಅಮ್ಮನ ಬಳಿ ಕೇಳಿದೆ. ಆದರೆ, ಅವರು ಬೇಡ, ಅಧಿಕಾರಿಗಳ ಗಮನ ಬರಬಹುದು ಎಂದಿದ್ದರು. ಆದರೆ, ಇಲ್ಲಿಯವರೆಗೂ ಅವರುಗಳ ಗಮನಕ್ಕೆ ಬಂದಿಲ್ಲ ಎಂದು ಅನಿರುದ್ಧ್ ನೋವು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿರುವ ಅವರು, ಈ ಹಿಂದೆ ವಾಣಿಜ್ಯ ಮಂಡಳಿಯಲ್ಲಿ ರಾಜ್ ಕುಮಾರ್ ಪುತ್ಥಳಿ ಇದ್ದು, ಇನ್ನೊಂದೆಡೆ ವಿಷ್ಣುವರ್ಧನ್ ಪುತ್ಥಳಿ ಇಡಲು ಪ್ರಯತ್ನ ಪಟ್ಟಿದ್ದೆ. ಇವತ್ತು ಅವರ ಪುತ್ಥಳಿ ಇಡಬೇಕು, ನಾಳೆ ಇನ್ನೊಬ್ಬರು ಬರುತ್ತಾರೆ, ಮತ್ತೊಬ್ಬರು ಬರುತ್ತಾರೆ. ಪ್ರತಿಯೊಬ್ಬರ ಪುತ್ಥಳಿ ಇಡಲು ಜಾಗ ಸಾಕಗಲ್ಲ ಎಂಬ ಮಾತು ಬಂದಿತ್ತು. ಕನ್ನಡ ಚಿತ್ರರಂಗ ಎಂದಾಗ ಎರಡು ಹೆಸರು ನೆನಪಾಗುತ್ತದೆ. ಡಾ.ರಾಜ್ ಕುಮಾರ್ ಅವರಿಗೆ ಸಲ್ಲುವ ಗೌರವಗಳೂ ಸಲ್ಲಬೇಕು. ಹಾಗೇ ಅಪ್ಪೋರಿಗೂ(ವಿಷ್ಣುವರ್ಧನ್)ಸಲ್ಲಬೇಕು. ಅವರಿಗೆ ಗೌರವ ಸಲ್ಲಿಸಿದ್ರೆ ನಮ್ಮ ನ್ನು ನಾವು ಗೌರವಿಸಿದಂತೆ. ನಮ್ಮ ಪರಂಪರೆಯನ್ನು, ನಮ್ಮ ಸಂಸ್ಕøತಿಯನ್ನು, ಕನ್ನಡ ಚಿತ್ರರಂಗವನ್ನು ಗೌರವಿಸಿದ ಹಾಗೆ ಎಂದು ಆಗ ತಿಳಿಸಿದ್ದೆ. ಆಗ ವಾಣಿಜ್ಯ ಮಂಡಳಿಯವರು, ವಿಷ್ಣುವರ್ಧನ್ ಅವರ ಪುತ್ಥಳಿ ಸ್ಥಾಪಿಸಲು ಎಲ್ಲಾ ಅಭಿಮಾನಿಗಳ ಸಹಿ ಸಂಗ್ರಹಿಸಿ ಎಂದಿದ್ದರು. ಇದು ಬಹಳಷ್ಟು ಬೇಸರ ಉಂಟು ಮಾಡಿತ್ತು. ಆದರೂ ನಾನು ಸಹಿ ಸಂಗ್ರಹಿಸಿಕೊಟ್ಟೆ. ಆದರೂ ಅದು ಆಗಿಲ್ಲ. ಈಗ ಕಟ್ಟಡದಲ್ಲಿ ಅವರ ಹೆಸರಿಲ್ಲ. ಅವರು ಅಧಿಕೃತವಾಗಿ ಸಂಘದ ಅಧ್ಯಕ್ಷರಾಗಿರಲಿಲ್ಲ. ಆದರೆ, ಅವರ ಅಧ್ಯಕ್ಷತೆಯಲ್ಲಿ ಅನೇಕ ಸಭೆಗಳು, ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಸಲಹೆ, ಸೂಚನೆಗಳನ್ನೂ ನೀಡಿದ್ದಾರೆ”
ಅವರು ಕಾಣೋದೇ ಇಲ್ವಾ ನಿಮಗೆ? ನೆನಪಿಗೆ ಬರಲ್ವಾ? ಅವರ ಹೆಸರಿಟ್ಟರೆ ಯಾರಿಗೆ ಗೌರವ? ನಾನು ಒಬ್ಬ ಕುಟುಂಬದ ಸದಸ್ಯನಾಗಿ ಹೇಳಬೇಕಾ? ಕೇಳ್ಕೋಬೇಕಾ? ಇದಕ್ಕಿಂತ ದುರಂತ ಬೇರೇನಿದೆ? ಆ ಬೋರ್ಡ್ ನೋಡಿದಾಗ 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಾಯಕ ನಟನ ಹೆಸರಿಲ್ಲವಲ್ಲಾ ಯಾರಿಗೂ ಏನೂ ಅನಿಸಲ್ವಾ?" ಎಂದು ಪ್ರಶ್ನಿಸಿದ್ದಾರೆ.
ಸಹ ಕಲಾವಿದರ ಹೆಸರಿಲ್ಲ, ನಾಯಕಿಯರ ಹೆಸರಿಲ್ಲ ಎಂಬ ಚರ್ಚೆಯೂ ನಡೆಯಬಹುದು. ನಡೀಬೇಕು ನಡೆಯಲಿ. ಆದರೆ, ಕಲಾವಿದರ ಸಂಘ ಎಂದ ಮೇಲೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರು ಇರಲೂ ಬೇಕು. ಅವರ ಹೆಸರು ಮರೆಯಲೂ ಸಾಧ್ಯವಿಲ್ಲ. ಚಲನಚಿತ್ರ ಕಲಾವಿದರ ಸಂಘದ ಸದಸ್ಯನಾಗಿ, ಅಭಿಮಾನಿಯಾಗಿ, ಕಲಾವಿದನಾಗಿ, ಕುಟುಂಬದ ಸದಸ್ಯನಾಗಿ, ಕಲಾವಿದರ ಸಂಘದ ಅಧಿಕಾರಿಗಳಲ್ಲಿ, ಕಲಾವಿದರಲ್ಲಿ ಈ ಪ್ರಶ್ನೆ ಕೇಳುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.