ಕುಂದಾಪುರ : ಅಕ್ಷರದಾಸೋಹ ನೌಕರರಿಗೆ ಆರ್ಥಿಕ ಪ್ಯಾಕೇಜ್, ಮೂರು ತಿಂಗಳ ವೇತನ ಬಿಡುಗಡೆಗೆ ಆಗ್ರಹ; ಪ್ರತಿಭಟನೆ
Published
0
ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಸರಕಾರದ ಸ್ಕೀಂ ಕೆಲಸಗಾರರಾಗಿರುವ ಅಕ್ಷರದಾಸೋಹ ನೌಕರರಿಗೆ ಲಾಕ್ ಡೌನ್ ಅವಧಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡದಿರುವುದನ್ನು ಖಂಡಿಸಿ ಹಾಗು ಮೂರು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿ ಇಂದು ತಾಲೂಕಿನಾದ್ಯಂತ ಅಕ್ಷರ ದಾಸೋಹ ನೌಕರರು ಪ್ರತಿಭಟಿಸಿದರು. ಕುಂದಾಪುರದ ತಾಲೂಕು ಪಂಚಾಯತ್ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ತಾಲೂಕು ಮುಖಂಡರಾದ ಶ್ರೀಮತಿ ಸಿಂಗಾರಿ ಮಾತನಾಡಿ, ಜೀವನವಿಡೀ ಈ ದೇಶದ ಮಕ್ಕಳ ಸೇವೆ ಮಾಡುವ ನೌಕರರ ಕೆಲಸಕ್ಕೆ ಗೌರವಯುತ ವೇತನ ನೀಡದೇ ಶೋಷಿಸುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಸರಕಾರ ಯಾವುದೇ ಪ್ಯಾಕೇಜು ಕೂಡ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಕಳೆದ ಮೂರು ತಿಂಗಳ ವೇತನವನ್ನು ಕೂಡಲೇ ಖಾತೆಗಳಿಗೆ ಜಮೆ ಮಾಡಬೇಕು. ಕರೋನ ಸಂಕಷ್ಟದಲ್ಲಿರುವ ನೌಕರರಿಗೆ ವೇತನ ಅಗತ್ಯವಿದೆ ಎಂದ ಅವರು ಎಲ್ಲಾ ನೌಕರರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ನಿವೃತ್ತರಾಗುವ ನೌಕರರಿಗೆ ಪಿಂಚಣಿ ಜಾರಿ ಮಾಡಲು ಸರಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಕುಂದಾಪುರದ ಸೌಕೂರು, ವಡೇರಹೋಬಳಿ, ಕೊಲ್ಲೂರು, ಮೂಡ್ಲಕಟ್ಟೆ, ಬಡಾಕೆರೆ,ಹಾಲಾಡಿ, ತಲ್ಲೂರು, ಹೆಮ್ಮಾಡಿ, ವಂಡ್ಸೆ ಮುಂತಾದ ಶಾಲೆಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದರು.
ವಿವಿದೆಡೆಯಲ್ಲಿ ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಎಚ್. ನರಸಿಂಹ, ನಾಗರತ್ನ, ನೌಕರರ ಮುಖಂಡರಾದ ಉಷಾ, ಶ್ಯಾಮಲ, ಸರೋಜ, ಶ್ರೀಮತಿ ಇದ್ದರು.