ಉಡುಪಿ : ನಿಟ್ಟೂರು ಪ್ರೌಢಶಾಲೆಯ 14 ವಿದ್ಯಾರ್ಥಿಗಳಿಗೆ ಹಳೆವಿದ್ಯಾರ್ಥಿ ಅನಂತ ಭಟ್ ಮಡಾಮಕ್ಕಿ ಶನಿವಾರ ಉಚಿತವಾಗಿ ಎಲ್.ಪಿ.ಜಿ ಗ್ಯಾಸ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಶಾಲೆಯಲ್ಲಾದ ಅಗಾಧ ಬದಲಾವಣೆ ಕಂಡು ವಿಸ್ಮಿತನಾಗಿದ್ದೇನೆ. ಸಂಪೂರ್ಣ ಉಚಿತವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳಾಗಿರುವ ನೀವು ಭಾಗ್ಯವಂತರು. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಶಾಲಾ ಆಡಳಿತ ಮಂಡಲಿಯ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರಾಸ್ತಾವಿಕ ಮಾತನಾಡುತ್ತಾ ಅನಂತ ಭಟ್ ಅವರಿಗೆ ಆರವತ್ತು ವರ್ಷ ತುಂಬುವ ಸುಸಂದರ್ಭದಲ್ಲಿ ಈ ಕೊಡುಗೆ ನೀಡಿದ್ದು, ಕಲಿತ ಶಾಲೆಯ ಬಗ್ಗೆ ಅವರಿಗೆ ಇರುವ ಅಭಿಮಾನ ಮತ್ತು ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ಇದು ಹಳೆವಿದ್ಯಾರ್ಥಿಗಳಿಗೆಲ್ಲ ಇದು ಅನುಕರಣೀಯ ನಡೆಯಾಗಿದೆ, ಗ್ಯಾಸ್ ಸಂಪರ್ಕ ಕಲ್ಪಿಸುವಲ್ಲಿ ಬಾಲಾಜಿ ರಾಘವೇಂದ್ರ ಆಚಾರ್ಯರ ಸಹಕಾರ ಸ್ಮರಣೀಯವಾದುದು ಎಂದು ನುಡಿದರು.
ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಹರಿಶ್ಚಂದ್ರ ಮಾತನಾಡಿ, ತನ್ನ ಸಹೋದರ ಅನಂತ ಓರ್ವ ಆದರ್ಶ ಕೃಷಿಕನಾಗಿದ್ದು, ನನಗೆ ಸ್ಪೂರ್ತಿ ಸೆಲೆಯಾಗಿದ್ದಾನೆ. ವಿದ್ಯಾರ್ಥಿಗಳು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಲ್ಲಿ ಮುಂದಿನ ನಿಮ್ಮ ಬಾಳು ಹಸನಾಗುವುದರಲ್ಲಿ ಅದು ಪೂರಕವಾಗುವುದು ಎಂದು ನುಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಎಸ್. ವಿ. ಭಟ್ ಮಾತನಾಡಿ, ಅನಂತ 45 ವರ್ಷಗಳ ಹಿಂದೆ ಶಾಲಾ ಯಕ್ಷಗಾನ ತಂಡದಲ್ಲಿ ಕಲಾವಿದನಾಗಿ ಶ್ರದ್ಧೆಯಿಂದ ಪಾತ್ರ ನಿರ್ವಹಿಸುತ್ತಿದ್ದುದನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಜಾಹ್ನವಿ ಅನಂತ ಭಟ್, ಪುತ್ರ ಆಶ್ರಯ ಭಟ್, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ದಿನೇಶ್ ಪಿ. ಪೂಜಾರಿ, ಕಾರ್ಯದರ್ಶಿ ಸಿ.ಎ ಪ್ರದೀಪ್ ಜೋಗಿ, ನಿವೃತ್ತ ಮುಖ್ಯೋಪಾಧ್ಯಾಯ ಕೆ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಎಚ್. ಎನ್. ಶೃಂಗೇಶ್ವರ ಕಾರ್ಯಕ್ರಮ ನಿರ್ವಹಿಸಿದರು.
ನಿಟ್ಟೂರು ಪ್ರೌಢಶಾಲೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಶಾಲೆಯ 80 ವಿದ್ಯಾರ್ಥಿಗಳಿಗೆ ಉಚಿತ ಗ್ಯಾಸ್ ಸೌಲಭ್ಯ ಕಲ್ಪಿಸಲಾಗಿದೆ.